
ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ
ಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ
ಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.12ರಿಂದ ಫೆ.18ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರೋತ್ಸವದ ಪ್ರಯುಕ್ತ ಫೆ.12 ಶನಿವಾರದಂದು ರಾತ್ರಿ 8.00ಕ್ಕೆ ಧ್ವಜಾರೋಹಣ ನಡೆಯಲಿದ್ದು ನಂತರ ಬಲಿ ಹೊರಟು ಉತ್ಸವ, ಶ್ರೀ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಫೆ.13 ಆದಿತ್ಯವಾರದಂದು ರಾತ್ರಿ ಗಂಟೆ 7.30ರಿಂದ ಬಲಿ ಹೊರಟು ಉತ್ಸವ ಮತ್ತು ತರವಾಡು ಮಾಲೆಂಗ್ರಿ ಪಿಲಿಕುಂಜ ಸ್ಥಾನದಿಂದ ಶ್ರೀ ಮಹಾಲಿಂಗರಾಯ ದೈವದ ಭಂಡಾರ ಬಂದು ಓಲೆ ಸವಾರಿ, ಹೊಸಮಜಲು ಕಟ್ಟೆಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಶ್ರೀ ನೇಲ್ಯಾರು ನೇಮ ಹಾಗೂ ಉಳ್ಳಾಲ್ತಿ ನೇಮೋತ್ಸವ ಜರುಗಲಿದೆ. ಫೆ.14 ಸೋಮವಾರದಂದು ಬೆಳಗ್ಗೆ 9.30ರಿಂದ ಬಲಿ ಹೊರಟು ಉತ್ಸವ “ಶ್ರೀ ದೇವರ ದರ್ಶನ ಬಲಿ”, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ ವಸಂತ ಕಟ್ಟೆಯಲ್ಲಿ ಪೂಜೆ ನಡೆಯಲಿದೆ. ಫೆ.15 ಮಂಗಳವಾರದಂದು ಬೆಳಗ್ಗೆ 9.30ರಿಂದ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 7.00ರಿಂದ ಬಲಿ ಹೊರಟು ಉತ್ಸವ ಬಲಿಯೊಂದಿಗೆ ಕೋಲಾಟ, ಮಹಾರಥೋತ್ಸವ ಪಾಟಾಳಿ ಕಟ್ಟೆ ಪೂಜೆ ಮತ್ತು ಮರೋಳಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಉದ್ರಾಂಡಿ ದೈವಗಳ ಓಲೆ ಸವಾರಿ ನಡೆಯಲಿದೆ. ನಂತರ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಭೂತಬಲಿ ಮತ್ತು “ಶ್ರೀ ದೇವರ ಶಯನೋತ್ಸವ” ನೆರವೇರಲಿದೆ. ಫೆ.16 ಬುಧವಾರದಂದು ಬೆಳಗ್ಗೆ ಕವಾಟೋದ್ಘಾಟನೆ, ತೈಲಾಭಿಷೇಕ, ಪಂಚಾಮೃತಾಭಿಷೇಕ ನಡೆಯಲಿದ್ದು, ಅಪರಾಹ್ನ ಶ್ರೀ ಎಲ್ಯಾರು ದೈವಗಳ ನೇಮ, ಮಿತ್ತೂರು ನಾಯರ್ ದೈವದ ನೇಮ, ರಾತ್ರಿ ಬಲಿ ಹೊರಟು ವಸಂತ ಕಟ್ಟೆಯಲ್ಲಿ ಸಾರ್ವಜನಿಕ ಕಟ್ಟೆಪೂಜೆ, ಬಿಲ್ವಪತ್ರೆ ಕಟ್ಟೆಯಲ್ಲಿ ಕಟ್ಟೆಪೂಜೆ ನಂತರ ನೂಚಿಲ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಕಟ್ಟೆಪೂಜೆ ಹಾಗೂ ಕುಮಾರಧಾರ ಭಂಡಾರಗಯದಲ್ಲಿ “ಅವಭೃತಸ್ನಾನ”, ಧ್ವಜ ಅವರೋಹಣ ನಡೆಯಲಿರುವುದು. ಫೆ.17 ಗುರುವಾರದಂದು ಬೆಳಗ್ಗೆ ಗಂಟೆ 9.00ರಿಂದ ಗಣಪತಿ ಹವನ, ಕಲಶ ಪೂಜೆ, ರುದ್ರಾಭಿಷೇಕ, ಕಲಶಾಭಿಷೇಕ, ಮಹಾಪೂಜೆ, “ಮಂತ್ರಾಕ್ಷತೆ”, ಪ್ರಸಾದ ವಿತರಣೆ ನಡೆದು “ಮಹಾ ಅನ್ನಸಂತರ್ಪಣೆ” ನಡೆಯಲಿದೆ. ಫೆ.18 ಶುಕ್ರವಾರದಂದು ಬೆಳಗ್ಗೆ ಮರೋಳಿ ಶಿರಾಡಿ ರಾಜನ್ ದೈವದ ಭಂಡಾರ ಬಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪೂಜೆ ನೆರವೇರಲಿದೆ. ಫೆ.13ರಿಂದ ಫೆ.15ರ ವರೆಗೆ ಪ್ರತಿನಿತ್ಯ ರಾತ್ರಿ 7.00ರಿಂದ 10.30ರ ವರೆಗೆ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿರುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ.15 ಮಂಗಳವಾರದಂದು ಶ್ರೀ ಲಕ್ಷ್ಮಣ ಆಚಾರ್ಯ ಬಳಗದವರಿಂದ ಕೀಲುಕುದುರೆ ಮತ್ತು ಬೊಂಬೆಯಾಟ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಸಕುಟುಂಬಿಕರಾಗಿ ಬಂದು ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗುವಂತೆ ಆಡಳಿತ ಮೊಕ್ತೇಸರರಾದ ಶ್ರೀ ಹರಿ ನೂಚಿಲರವರು ವಿನಂತಿಸಿದ್ದಾರೆ.