ಕಸ್ತೂರಿರಂಗನ್ ವರದಿ ಹೆಸರಿನಲ್ಲಿ ಅರಣ್ಯ ಖಾಯಿದೆಗಳು ಮೂಲನಿವಾಸಿಗಳಿಗೆ ಮಾರಕವಾಗುತ್ತಿದ್ದು ಉದ್ಯಮಿಗಳಿಗೆ, ಎಸ್ಟೆಟ್, ಲೀಸ್ ಗೆ ಅರಣ್ಯ ಜಾಗ ಪಡೆದವರಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಮಲೆನಾಡಿನ ಸಮಸ್ಯೆಯ ಪರಿಹಾರಕ್ಕೆ 2011 ರಿಂದ ಹೋರಾಟ ಮಾಡಿದರೂ ಪ್ರಯೋಜನ ಬರುತ್ತಿಲ್ಲ. ಇದರ ಬಗ್ಗೆ ಯಾವುದೇ ಜನಪ್ರತಿನಿಧಿಗಳಿಗೆ ಕಿಂಚಿತ್ತೂ ಮಾಹಿತಿಯೂ ಇಲ್ಲ. ಅದರ ಬಗ್ಗೆ ಆಸಕ್ತಿಯೂ ಇಲ್ಲ. ಕ್ಷೇತ್ರಗಳ ಮೀಸಲಾತಿ ಬದಲಾವಣೆ ಕೂಡ ಹಲವಾರು ವರ್ಷಗಳಿಂದ ಬಾಕಿಯುಳಿದಿದೆ. ಮಲೆನಾಡಿನ ಜನರ ಪರವಾಗಿ ಹೋರಾಟ ನಡೆಸುವ ನಿಟ್ಟಿನಲ್ಲಿ ಮಲೆನಾಡ ರಾಜಕೀಯ ಪಕ್ಷ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿಯ ಸಂಚಾಲಕರಾದ ಪ್ರದೀಪ್ ಕುಮಾರ್ ಕೆ.ಎಲ್ ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು ಹಂತ ಹಂತವಾಗಿ ಕಸ್ತೂರಿ ರಂಗನ್ ವರದಿಯನ್ನಿಟ್ಟುಕೊಂಡು ಸರಕಾರಗಳು ಮಲೆನಾಡಿನ ಮೂಲ ನಿವಾಸಿಗಳ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಗ್ರೇಟರ್ ತಲಕಾವೇರಿ, ಆನೆ ಕಾರಿಡಾರ್, ವನ್ಯಧಾಮ ಯೋಜನೆ ಹೆಸರಿನಲ್ಲಿ ಬಡವರಿಗೆ ಅನ್ಯಾಯ ಮಾಡುವುದರ ಜತೆಗೆ ಕಾರ್ಪೋರೆಟ್ ಕಂಪೆನಿಗಳನ್ನು ಬೆಳೆಸುತ್ತಿದೆ. ಸರಕಾರಗಳು ಲೀಸ್ ಗೆ ನೀಡಿದ ಅರಣ್ಯ ಭೂಮಿ ಅವಧಿ ಮುಗಿದರೂ ಇನ್ನೂ ಅವರು ಯಾವುದೇ ಭಯವಿಲ್ಲದೇ ಅನುಭವಿಸುತ್ತಿದ್ದಾರೆ. ರೆಸಾರ್ಟ್ ಗಳು ತಲೆ ಎತ್ತುತ್ತಿದೆ. ಪ್ರವಾಸೋದ್ಯಮ ಕ್ಕೆ ಅವಕಾಶ ನೀಡುವ ಹೆಸರಿನಲ್ಲಿ ಬಡವರ ಭೂಮಿ ಕಡಿಮೆ ಬೆಲೆಗೆ ಖರೀದಿ ಮಾಡಿ ಮಾಡುತ್ತಿದ್ದಾರೆ ಎಂದರು.
ಹಲವಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಭೂಮಿ ಅಕ್ರಮ ಸಕ್ರಮ ಆಗುತ್ತಿಲ್ಲ. ಕಲ್ಮಕಾರು, ಸಂಪಾಜೆ ಭಾಗದ ಎಸ್ಟೇಟ್ ಗಳಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ. ಇಲ್ಲಿ ಹುಟ್ಟಿದ ಮಕ್ಕಳಿಗೆ ತಾಯಿ ಕಾರ್ಡು, ಆಧಾರ್ ಕಾರ್ಡ್ ನೀಡಲಾಗುತ್ತಿದೆ. ಅಕ್ರಮ ಚಟುವಟಿಕೆಯ ತಾಣಗಳಾಗುತ್ತಿದೆ. ಇದು ಗೊತ್ತಿದ್ದರೂ ಅಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಮಲೆನಾಡಿನ ಜನರ ಹಲವಾರು ಸಮಸ್ಯೆಗಳ ಬಗ್ಗೆ ಹೋರಾಟದ ಮುಂದುವರಿದ ಭಾಗವಾಗಿ ರಾಜಕೀಯ ಪಕ್ಷ ಆರಂಭಿಸಿ ಜನಾಂದೋಲನ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಜಂಟಿ ಕ್ರೀಯಾ ಸಮಿತಿಯ ಅಶೋಕ್ ಎಡಮಲೆ, ಮಾಧವ ಗೌಡ ಸುಳ್ಯಕೋಡಿ ಉಪಸ್ಥಿತರಿದ್ದರು.