Ad Widget

ಹಿರಿಯ ವೈದ್ಯರಾದ ಡಾ| ಚಂದ್ರಶೇಖರ ಕಿರಿಭಾಗ ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ – ಅ.07 ರಂದು ಪ್ರಶಸ್ತಿ ಪ್ರದಾನ

ವರದಿ : ಉಲ್ಲಾಸ್ ಕಜ್ಜೋಡಿ

“ವೈದ್ಯೋ ನಾರಾಯಣೋ ಹರಿಃ” ಎಂಬ ಮಾತಿಗೆ ಅನುಗುಣವಾಗಿ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆಯನ್ನು ಕಳೆದ 50 ವರ್ಷಗಳಿಂದ ಸಮಾಜಿಕ ಕಳಕಳಿಯಿಂದ ನಡೆಸಿಕೊಂಡು ಬರುತ್ತಿರುವವರು, ವಾಹನ ಸಂಚಾರವಿಲ್ಲದ ಕಾಲಘಟ್ಟದಲ್ಲಿ ತನ್ನ ಬೈಕಿನಲ್ಲಿ ರೋಗಿಗಳ ಮನೆಗೆ ತೆರಳಿ ಶುಶ್ರೂಷೆ ನೀಡುತ್ತಾ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ ಇದ್ದ ಸಮಯದಲ್ಲಿ ಜನರಿಗೆ ಅರಿವು-ನೆರವು-ಚಿಕಿತ್ಸೆಯನ್ನು ನೀಡುತ್ತಾ ಬಂದವರು, ಅದೆಷ್ಟೋ ಮಹಿಳೆಯರಿಗೆ ಸಾವಿರ ಸಂಖ್ಯೆಯಲ್ಲಿ ಸುಲಭ ಹೆರಿಗೆ ಮಾಡಿಸಿ “ಡಾಕ್ಟರಣ್ಣ” ಎಂದು ಹೆಸರಾದವರು, ತನ್ನೂರಿಗೆ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರ ಆರೋಗ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿರಿಸಿ ತನ್ನ 82 ವರ್ಷಗಳ ಇಳಿವಯಸ್ಸಿನಲ್ಲೂ ಹರಿಹರ ಪಲ್ಲತ್ತಡ್ಕದಲ್ಲಿ ಚಿಕಿತ್ಸಾ ಕೇಂದ್ರವನ್ನು ನಡೆಸಿಕೊಂಡು ಬರುತ್ತಿರುವ, ತನ್ನೂರಿನ ಭಜನಾ ಮಂದಿರಕ್ಕೆ ಸ್ಥಳದಾನ ನೀಡುವುದಲ್ಲದೇ ಹರಿಹರೇಶ್ವರ ದೇವಸ್ಥಾನದಲ್ಲಿ 15 ವರ್ಷಗಳ ಕಾಲ ಅಧ್ಯಕ್ಷರಾಗಿ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವ ಪರ್ವದಿನಗಳ ನಾಯಕತ್ವ ವಹಿಸಿ ಮುನ್ನಡೆದ ಡಾ| ಚಂದ್ರಶೇಖರ ಕಿರಿಭಾಗ ಅವರು ಗಾಂಧಿ ಜಯಂತಿ ಪ್ರಯುಕ್ತ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಹಾಗೂ ಸುಳ್ಯದ ಯುವಜನ ಸೇವಾ ಸಂಸ್ಥೆ ಕೊಡಮಾಡುವ ಗಾಂಧಿ ಸ್ಮೃತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅ.07 ರಂದು ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಅ.07 ರಂದು ಬೆಳಿಗ್ಗೆ ಮೀರಾ ಭಜನ್ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಅವರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್ ಭೋಜೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲರಾದ ಪ್ರಭಾಕರ ಕಿರಿಭಾಗ ಅವರು ಅಭಿನಂದನಾ ಮಾತುಗಳನ್ನಾಡಲಿದ್ದು, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಅವರು ಗಾಂಧಿ ಪ್ರತಿಪಾದನೆಯ ಮೌಲ್ಯಗಳ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!