
ಸುಳ್ಯ ಲಯನ್ಸ್ ಕ್ಲಬ್ ಅನೇಕ ಜನಪರ ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಸುಳ್ಯದ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದು ಸಂಸ್ಥೆ 51ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಯೋಜನೆ ರೂಪಿಸುವ ದೃಷ್ಟಿಯಿಂದ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಅಧ್ಯಕ್ಷರಾದ ಲಯನ್ ವೀರಪ್ಪ ಗೌಡ ಕಣ್ಕಲ್ ತಿಳಿಸಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾವು ಕೊಡಿಯಾಲಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಆಯ್ಕೆ ಮಾಡಿದ್ದೇವೆ. ಈ ಶಾಲೆಗೆ ಲಭ್ಯವಿರುವ 2.30 ಎಕ್ರೆ ಸ್ಥಳದಲ್ಲಿ ಅಡಿಕೆ, ತೆಂಗು ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು 4 ವರ್ಷಗಳ ಕಾಲ ಪೋಷಣೆ, ಮಾಡಿ ಶಾಲಾಭಿವೃದ್ಧಿ ಸಮಿತಿಗೆ ಬಿಟ್ಟುಕೊಡುವ ಯೋಜನೆ ಹಾಕಿದ್ದೇವೆ . ಸುಮಾರು ಒಂದು ಎಕ್ರೆ ವಿಸ್ತೀರ್ಣದಲ್ಲಿ 300 ಅಡಿಕೆ ಗಿಡ 10 ತೆಂಗಿನ ಗಿಡ ಮತ್ತು ಹಣ್ಣಿನ ಗಿಡಗಳನ್ನು ನೆಡಲು ನೆಲ ಸಮತಟ್ಟು ಕಾರ್ಯ ಮತ್ತು ನೀರಿನ ವ್ಯವಸ್ಥೆಗಾಗಿ ಸಿಂಕ್ಲರ್ ಆಳವಡಿಸಿ ಆ.28 ರಂದು ಗಿಡನೆಡುವ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ ಎಂದರು.
ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ವೀರಪ್ಪ ಗೌಡ ಕಣ್ಕಲ್ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಳಾಗಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಧನಂದ ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟಿನಿ ಎಸ್. ಮರಿಯಪ್ಪ, ಲಯನ್ಸ್ ಮುಖ್ಯ ಜಿಲ್ಲಾ “ಗ್ಲೋಬಲ್ ಸರ್ವೀಸ್ ಬ್ಯಾಂಕಿನ ಕೋ ಆರ್ಡಿನೇಟರ್ ಲ. ಜಗದೀಶ – ಎಡಪಡಿತ್ತಾಯ , ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಸೂಂತೋಡು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ ಬಿ.ಈ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಕೆ.ಎಂ. ರಮೇಶ, ಲಯನ್ ಪ್ರಾಂತ್ಯ VII ರ ಪ್ರಾಂತೀಯ ಅಧ್ಯಕ್ಷ ಲಯನ್ ರೇಣುಕಾ ಸದಾನಂದ ಜಾಕೆ, ಮಧುಸೂದನ್ ಕಸ್ತೂರಿ ನರ್ಸರಿ, ಹಾಗೂ ಶ್ರೀಮತಿ ಚಂದ್ರಕಲಾ ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ವಿವರ ನೀಡಿದರು.
ಗ್ರಾಮ ಪಂಚಾಯತ್ ಉಬರಡ್ಕ, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪೋಷಕ ಸಮಿತಿ, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ವಿಷ್ಣು ಯುವಕ ಮಂಡಲ, ವರಲಕ್ಷ್ಮಿ, ಯುವತಿ ಮಂಡಲ, ಹಳೆ ವಿದ್ಯಾರ್ಥಿ ಸಂಘ, ಸ್ಥಳೀಯ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ, ಮಹಮ್ಮಾಯಿ ಸಂಘ ಮತ್ತು ಇತರ ಸಂಘ ಸಂಸ್ಥೆಗಳು, ಇವರು ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ ಎಂದರು.


ನಮ್ಮ ಉದ್ದೇಶ ಸರಕಾರಿ ಶಾಲೆಗೆ ನಿರಂತರ ಆದಾಯ ಕಲ್ಪಿಸುವುದು, ಒಂದು ಮಾದರಿ ಸರಕಾರಿ ಶಾಲೆಯನ್ನು ರೂಪಿಸುವುದು. ಇದರೊಂದಿಗೆ ತಾಲೂಕಿನ ಅನೇಕ ಸರಕಾರಿ ಶಾಲೆಗಳಿಗೆ ಸ್ಥಳ ಲಭ್ಯವಿದ್ದು, ಇಂತಹ ಯೋಜನೆಗಳನ್ನು ಸಾರ್ವಜನಿಕರು ಸ್ಥಳೀಯ ಸಂಘ, ಸಂಸ್ಥೆಗಳು ಕೈಗೊಳ್ಳಲು ಪ್ರೇರಣೆಯಾಗಬಹುದೆಂಬ ಆಶಯ ಎಂದು ಅವರು ಹೇಳಿದರು .
ಯೋಜನಾ ನಿರ್ದೇಶಕ ಹರೀಶ್ ರೈ ಉಬರಡ್ಕ ಮಾತನಾಡಿ ನಾವು ಸಂಪೂರ್ಣ ಅಭಿವೃದ್ಧಿಯ ದೃಷ್ಟಿಯಲ್ಲಿ ಮಾತ್ರ ಕೆಲಸ ಮಾಡುತ್ತೇವೆ ಯಾವುದೇ ಆಡಳಿತ ವ್ಯವಸ್ಥೆಯನ್ನು ಮಾಡುವುದಿಲ್ಲಾ ಅಲ್ಲದೇ ಶಿಕ್ಷಕರ ನೇಮಕ ಇತರ ಯಾವುದೇ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು . ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಲಯನ್ ದೊಡ್ಡಣ್ಣ ಬರಮೇಲು , ಕೋಶಾಧಿಕಾರಿ ಲಯನ್ ಕಿರಣ್ ನೀರ್ಪಾಡಿ , ಪ್ರಾಂತೀಯ ಅಧ್ಯಕ್ಷರಾದ ಲಯನ್ ರೇಣುಕಾ ಜಾಕೆ ಉಪಸ್ಥಿತರಿದ್ದರು.