ಕೃಷಿ ಲೋಕ : ಕಾಡು ಹಣ್ಣು – ಕೋಳಿ ಜುಟ್ಟು ಹಣ್ಣು

ಹಣ್ಣು ಎಂದಾಕ್ಷಣ ಇದೀಗ ಎಲ್ಲೆಡೆ ವಿದೇಶಿ ಹಣ್ಣುಗಳದ್ದೇ ಹವಾ. ನಮ್ಮ ಕಾಡು ಹಣ್ಣುಗಳ ಔಷಧೀಯ ಗುಣಗಳ ಮುಂದೆ ಇದೇನು ಅಲ್ಲ, ಮುಂದೊಂದು ದಿನ ಇವುಗಳ ಬಗ್ಗೆಯೂ ಆಂದೋಲನ ಮಾಡಬೇಕಾಗಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಹಣ್ಣುಗಳ ಒಳಗೆ ಏನು ಅಡಗಿದೆ..!?, ನಾವು ತಿನ್ನುವ ಹಣ್ಣುಗಳು ನಿಜವಾಗಿಯೂ ಸುರಕ್ಷಿತವೇ..!?, ಅಂದು ಹಣ್ಣು ಅದಾಗಿಯೇ ಹಣ್ಣಾಗುತ್ತಿತ್ತು, ಆದರೆ ಇಂದು ತಿಂದಾಕ್ಷಣ ನಮ್ಮ ಹೊಟ್ಟೆಯಲ್ಲಿ ಹುಣ್ಣಾಗುತ್ತಿವೆ.

. . . . . . . . .

ಬದುಕಿನಲ್ಲಿ ಎಲ್ಲಾ ಯಶಸ್ಸಿಗೂ ಮೂರು ಔಷಧಗಳಿವೆ. ಒಂದು ವಿದ್ಯೆ, ಇನ್ನೊಂದು ದುಡಿಮೆ ಹಾಗೂ ಮತ್ತೊಂದು ತಾಳ್ಮೆ. ಜೀವನದ ಖುಷಿಯನ್ನು ನಾವು ನಮ್ಮಲ್ಲೇ ಕಂಡುಕೊಳ್ಳಬೇಕು, ಇದು ಇನ್ನೆಲ್ಲೋ ಸಿಗುವುದಿಲ್ಲ. ಯಾವಾಗಲೂ ಎಲ್ಲಾ ನೋವು ದುಃಖಗಳನ್ನು ದೇವರು ನಮಗೆ ಯಾಕೆ ನೀಡುತ್ತಾನೆ…!? ನಿಜ ಹೇಳಬೇಕೆಂದರೆ ಒಂದು ವಸ್ತುವಿನ ಖುಷಿಯ ಕೀಲಿ ಕೈ ನಮ್ಮಲ್ಲೇ ಇರಬೇಕು.

. . . . . . .

ಈಗ ನಾವು ಈ ಲೇಖನದಲ್ಲಿ ಹೇಳಲು ಹೊರಟಿರುವ ಹಣ್ಣು ಇದೊಂದು ಹುಳಿ ಹಣ್ಣು ಇದರಲ್ಲಿ ಸಿ – ವಿಟಮಿನ್ ಹೇರಳವಾಗಿದ್ದು, ಕಣ್ಣಿನ ದೃಷ್ಟಿಗೆ ಉತ್ತಮ ಔಷಧ. ಹಾಗೂ ಇದರಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ, ಫೈಬರ್ ನಾರಿನ ಅಂಶವು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಚಿಕ್ಕ ಮಕ್ಕಳಿಗಂತೂ ಅತ್ಯಂತ ರುಚಿಕರ ಹಣ್ಣಾಗಿರುವ ಇದು ರಸ್ತೆ ಬದಿ, ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೊಂಚಲು ಗೊಂಚಲು ತುಂಬಾ ಸೆರಗು ಹೊದ್ದಂತಿರುವ ಈ ಹಣ್ಣಿನ ಮರವನ್ನು ಕಾಣುವುದೇ ಚಂದ. ಒಂದು ಗೊಂಚಲಿನಲ್ಲಿ 25 ರಿಂದ 50 ಹಣ್ಣುಗಳನ್ನು ಹೊಂದಿರುವ ಇದು ಅತ್ಯಾಕರ್ಷಕ ಬಣ್ಣವನ್ನೂ ಹೊಂದಿದೆ. ಇದು ಬೀಮ್ ಪುರುಳಿ, ಅಂಜೂರ ಹಾಗೂ ಅತ್ತಿ ಹಣ್ಣುಗಳಂತೆ ಒಂದು ವಿಧದ ಕಾಡು ಹಣ್ಣು. ಕಡಿಮೆ ಕ್ಯಾಲರಿ ಹೊಂದಿರುವ ಈ ಹಣ್ಣು ದೇಹದ ತೂಕವನ್ನು ಇಳಿಸಲು ಸಹಾಯವಾಗುತ್ತದೆ. ಅಷ್ಟೇ ಅಲ್ಲದೇ ಸಾರು, ಉಪ್ಪಿನಕಾಯಿ ಸೇರಿದಂತೆ ಮುಂತಾದ ಆಹಾರೋತ್ಪನ್ನಗಳನ್ನು ಈ ಹಣ್ಣಿನಿಂದ ತಯಾರಿಸಬಹುದಾಗಿದೆ. ಈ ಹಣ್ಣಿನ ಮರಕ್ಕೆ ಪೊಟ್ಯಾಶಿಯಂ ಚೆನ್ನಾಗಿ ಕೊಟ್ಟಾಗ ಇದು ಇನ್ನಷ್ಟು ಸಿಹಿ ಹಣ್ಣುಗಳನ್ನು ನೀಡುತ್ತದೆ.

ಈ ಅಪರೂಪದ ಕಾಡು ಹಣ್ಣನ್ನು ಕನ್ನಡದಲ್ಲಿ ಕೋಳಿಜುಟ್ಟು ಹಣ್ಣು, ಕೋಳಿ ಕುಕ್ಕೆ ಅಥವಾ ಮೈಂದಪುಳಿ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು Baccaurea courtallensis. ಮಲಯಾಳಂನಲ್ಲಿ ಇದನ್ನು ಮೂಟ್ಟಿಪಳಂ ಅಥವಾ ಮೂಟ್ಟಿಪುಳಿ ಎಂದು ಕರೆಯಲಾಗುತ್ತದೆ. ಇದು ಭಾರತದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಮಾತ್ರ ಕಂಡುಬರುವ ಒಂದು ವಿಶಿಷ್ಟವಾದ ಹಣ್ಣಿನ ತಳಿಯಾಗಿದೆ. ಈ ಮರದ ವಿಶೇಷತೆಯೆಂದರೆ ಇದರ ಹಣ್ಣುಗಳು ಕೊಂಬೆಗಳಲ್ಲಲ್ಲದೇ ನೇರವಾಗಿ ಮರದ ಕಾಂಡದ ಬುಡದಲ್ಲಿ ಗೊಂಚಲು ಗೊಂಚಲಾಗಿ ಬೆಳೆಯುತ್ತವೆ.

ಪಶ್ಚಿಮ ಘಟ್ಟಗಳ ಅಪರೂಪದ ಕಾಡು ಹಣ್ಣಿನ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಬೆಳೆಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪ ಬಿಳಿ ನೆಲೆಯ ವಾಸ್ತು ತಜ್ಞ ಎಸ್. ಪ್ರಸಾದ್ ಮುನಿಯಂಗಳವರು. ಇವರ ತೋಟದಲ್ಲಿ ನೂರಕ್ಕೂ ಮಿಕ್ಕಿ ಹಣ್ಣಿನ ಗಿಡಗಳನ್ನು ನರ್ಸರಿಯಿಂದ ತಂದು ಮೂರು ವರ್ಷಗಳ ಹಿಂದೆ ನಾಟಿ ಮಾಡಿದ್ದರು. ಈ ಹಣ್ಣಿನ ಗಿಡಕ್ಕೆ ಹೆಚ್ಚಿನ ಆರೈಕೆ ಬೇಡದೇ ಇದ್ದು ಚೆನ್ನಾಗಿ ಬೆಳೆದು ಇದೀಗ ಫಲಭರಿತ ಹಣ್ಣುಗಳನ್ನು ಜೂನ್-ಜುಲೈ ತಿಂಗಳಲ್ಲಿ ನೀಡಲು ಪ್ರಾರಂಭಿಸಿದೆ. ನೇರಳೆ ಹಣ್ಣಿನಂತೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಣ್ಣು ಇದಾಗಿದ್ದು, ಇದನ್ನು ಎಲ್ಲೂ ಇಷ್ಟೊಂದು ಮಟ್ಟಕ್ಕೆ ಬೆಳೆಯಲಿಲ್ಲ. ಕಾಡಲ್ಲಷ್ಟೇ ಇದು ಇದೀಗ ನಾಡಿಗೆ ಬಂದು ಫಲವನ್ನು ಕಂಡಿದೆ.

ನಮ್ಮ ಪಶ್ಚಿಮ ಘಟ್ಟಗಳು ಅಪರೂಪದ ಜೀವವೈವಿಧ್ಯಗಳ ತವರೂರು. ಇಲ್ಲಿನ ದಟ್ಟವಾದ ಮಳೆಕಾಡುಗಳ ನಡುವೆ ಸಂಚರಿಸುವಾಗ ಪ್ರಕೃತಿಯ ಅದೆಷ್ಟೋ ಅದ್ಭುತಗಳು ನಮ್ಮ ಕಣ್ಣಿಗೆ ಕಾಣಸಿಗುತ್ತವೆ. ಅಂತಹ ವಿಸ್ಮಯಗಳಲ್ಲಿ ಅತ್ಯಂತ ಆಕರ್ಷಕ ಹಾಗೂ ಅಪರೂಪದ ರೆಂಬೆ-ಕೊಂಬೆಗಳಲ್ಲಿ, ಚಿಗುರೆಲೆಗಳ ನಡುವೆ ಹೂಬಿಟ್ಟು ಹಣ್ಣಾಗುವ ಅದೆಷ್ಟೋ ಮರಗಳನ್ನು ನಾವು ನೋಡಿರುತ್ತೇವೆ. ಆದರೆ ಈ ಕೋಳಿ ಕುಕ್ಕೆ ಮರದ ವೈಶಿಷ್ಟ್ಯವೇ ಬೇರೆ..! ಸಸ್ಯವಿಜ್ಞಾನದಲ್ಲಿ ‘ಕೌಲಿಫ್ಲೋರಸ್’ ಎಂದು ಕರೆಯಲಾಗುವ ಈ ಹಣ್ಣುಗಳು ಕೊಂಬೆಗಳಲ್ಲಲ್ಲದೆ ನೇರವಾಗಿ ಮರದ ಪ್ರಮುಖ ಕಾಂಡದ ಮೇಲೆಯೇ ಬಿಡುತ್ತವೆ. ಮಧ್ಯಮ ಗಾತ್ರದಲ್ಲಿ ಅಂದರೆ ಸುಮಾರು 10 ರಿಂದ 18 ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುವ ಈ ಮರದ ಬೂದು ಬಣ್ಣದ ತೊಗಟೆಯ ಮೇಲೆ ಸಣ್ಣ ಸಣ್ಣ ಗಂಟುಗಳಂತಹ ರಚನೆಗಳಿರುತ್ತವೆ. ಆಗಸ್ಟ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಈ ಮರಗಳು ಹೂ ಬಿಡಲು ಆರಂಭಿಸುತ್ತವೆ. ಮೊದಲು ರಕ್ತಗೆಂಪು ಬಣ್ಣದ ಗಂಡು ಮತ್ತು ಹೆಣ್ಣು ಹೂವುಗಳು ಪ್ರತ್ಯೇಕವಾಗಿ ಕಾಂಡದಿಂದ ಹೊರಬರುತ್ತವೆ. ಗಂಡು ಹೂಗೊಂಚಲುಗಳು ಇಡೀ ಕಾಂಡದಾದ್ಯಂತ ಹರಡಿಕೊಂಡಿದ್ದರೆ, ಹೆಣ್ಣು ಹೂಗೊಂಚಲುಗಳು ಹೆಚ್ಚಾಗಿ ಕಾಂಡದ ಬುಡಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ನಂತರ ಇವು ದಟ್ಟವಾದ ಕ್ರಿಮ್ಸನ್(ಗಾಢ ಕೆಂಪು) ಬಣ್ಣದ ದೊಡ್ಡ ಹಣ್ಣಿನ ಗೊಂಚಲುಗಳಾಗಿ ಬದಲಾಗಿ, ಇಡೀ ಮರದ ಬುಡವನ್ನು ಕೆಂಪು ಹಾಸಿನಂತೆ ಕಂಗೊಳಿಸುವಂತೆ ಮಾಡುತ್ತವೆ.

ವನ್ಯಜೀವಿಗಳ ಹಸಿವು ನೀಗಿಸುವ ಮರ : ಕೋಳಿ ಕುಕ್ಕೆ ಹಣ್ಣುಗಳು ಕೇವಲ ನೋಡಲು ಸುಂದರ ಮಾತ್ರವಲ್ಲ, ಕಾಡಿನ ಜೀವಚಕ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಚಿಗುರೆಲೆಗಳು ಮತ್ತು ಹಣ್ಣುಗಳು ಕಾಡಿನ ಅನೇಕ ವನ್ಯಜೀವಿಗಳಿಗೆ ಪ್ರಮುಖ ಆಹಾರ. ಪಶ್ಚಿಮ ಘಟ್ಟಗಳ ವಿಶಿಷ್ಟ ಪ್ರಾಣಿಗಳಾದ ನೀಲಗಿರಿ ಲಂಗೂರ್‌ಗಳು, ಸಿಂಹಬಾಲದ ಕೋತಿಗಳು ಮತ್ತು ಕಾಡಾನೆಗಳು ಈ ಮಾಗಿದ ಹಣ್ಣುಗಳನ್ನು ಅತ್ಯಂತ ಇಷ್ಟಪಟ್ಟು ತಿನ್ನುತ್ತವೆ. ಹುಳಿ-ಸಿಹಿಯ ರುಚಿ ಮತ್ತು ವೈದ್ಯಕೀಯ ಗುಣ ಮಾನವರಿಗೂ ಈ ಹಣ್ಣು ತಿನ್ನಲು ಯೋಗ್ಯವಾಗಿದೆ. ಇದರ ಗಟ್ಟಿಯಾದ ಕೆಂಪು ಸಿಪ್ಪೆಯನ್ನು ಸುಲಿದರೆ ಒಳಗೆ ಬಿಳಿ ಅಥವಾ ತಿಳಿ ಗುಲಾಬಿ ಬಣ್ಣದ ರಸಭರಿತವಾದ ತಿರುಳು ಸಿಗುತ್ತವೆ. ಇದು ಹುಳಿ ಮತ್ತು ಸಿಹಿಯ ಅದ್ಭುತ ಮಿಶ್ರಣದ ರುಚಿ ಹೊಂದಿರುತ್ತದೆ. ಸ್ಥಳೀಯ ಗಿರಿಜನರು ಹಾಗೂ ಮಲೆನಾಡಿನ ಜನರು ಇದನ್ನು ತಾಜಾ ಹಣ್ಣಾಗಿ ತಿನ್ನುತ್ತಾರೆ. ಇನ್ನು ಪೂರ್ತಿಯಾಗಿ ಹಣ್ಣಾಗದ ಕಾಯಿಗಳು ತೀವ್ರವಾದ ಹುಳಿ ಹೊಂದಿರುವುದರಿಂದ ಇವುಗಳಿಂದ ಸಾಂಪ್ರದಾಯಿಕ ಉಪ್ಪಿನಕಾಯಿ, ಚಟ್ನಿ ಹಾಗೂ ತಂಪು ಪಾನೀಯಗಳನ್ನು ಸಿದ್ಧಪಡಿಸಲಾಗುತ್ತದೆ.

ಸ್ಥಳೀಯ ಬುಡಕಟ್ಟು ವೈದ್ಯ ಪದ್ಧತಿಯಲ್ಲಿ ಈ ಮರಕ್ಕೆ ವಿಶೇಷ ಸ್ಥಾನವಿದೆ. ಇದರ ತಾಜಾ ತಿರುಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ, ಭೇದಿ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಮರದ ಬೂದು ಬಣ್ಣದ ತೊಗಟೆಯ ಕಷಾಯವನ್ನು ಚರ್ಮದ ಗಾಯಗಳನ್ನು ಬೇಗನೆ ಗುಣಪಡಿಸಲು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಇದರ ಬೇರುಗಳನ್ನು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಬಳಸುವ ಉಲ್ಲೇಖಗಳೂ ಇವೆ. ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಹೆಮ್ಮೆ ಈ ಕೋಳಿ ಕುಕ್ಕೆ ಮರವು ಕೇವಲ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಮಳೆಕಾಡುಗಳಿಗೆ ಮಾತ್ರ ಸೀಮಿತವಾದ ಅಪರೂಪದ ತಳಿಯಾಗಿದೆ. ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಹಿಡಿದು ಕೇರಳ ಮತ್ತು ತಮಿಳುನಾಡಿನ ಕನ್ಯಾಕುಮಾರಿಯವರೆಗಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಇವು ನೈಸರ್ಗಿಕವಾಗಿ ಬೆಳೆಯುತ್ತವೆ. ಸೀಮಿತ ಪರಿಸರ ಮತ್ತು ಅರಣ್ಯ ನಾಶದ ಕಾರಣದಿಂದಾಗಿ, ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘವು ತನ್ನ ಕೆಂಪು ಪಟ್ಟಿಯಲ್ಲಿ ಇದನ್ನು ‘ಅಳಿವಿನಂಚಿನಲ್ಲಿರುವ ಹತ್ತಿರದ ತಳಿ’ ಎಂದು ವರ್ಗೀಕರಿಸಿದೆ.

ಪ್ರಕೃತಿಯ ಈ ರೀತಿಯ ಅಪರೂಪದ ಕೊಡುಗೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅಪರೂಪದ ಹಣ್ಣುಗಳನ್ನು ಇಷ್ಟಪಡುವ ಕೆಲವು ಪ್ರಗತಿಪರ ರೈತರು ಇದನ್ನು ತಮ್ಮ ಮನೆಹಿತ್ತಲು ಹಾಗೂ ತೋಟಗಳಲ್ಲಿ ಬೆಳೆಸಲು ಆಸಕ್ತಿ ತೋರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಬೀಜದಿಂದ ಅಥವಾ ಕಸಿ ಮಾಡಿದ ಗಿಡಗಳನ್ನು ನೆಟ್ಟರೆ, ಅವು ಕಾಂಡದ ಮೇಲೆ ಹಣ್ಣು ಬಿಡಲು ಸುಮಾರು 4 ರಿಂದ 6 ವರ್ಷಗಳು ಬೇಕಾಗುತ್ತವೆ. ಪಶ್ಚಿಮ ಘಟ್ಟದ ಇಂತಹ ಅಪರೂಪದ ಸಸ್ಯಸಂಕುಲದ ರಕ್ಷಣೆ ಅಗತ್ಯವಾಗಿದೆ.

ಚಿತ್ರ ಬರಹ : ಕುಮಾರ್ ಪೆರ್ನಾಜೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading