Ad Widget

ಕುಕ್ಕೆ: ದೇವರ ದರ್ಶನಕ್ಕೆ ಮಾತ್ರ ಅವಕಾಶ – ಹರಿಕೆ ಸೇವೆಗಳಿಲ್ಲ – ಮಂಗಳಾರತಿಗೆ ಅವಕಾಶ


ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.೨೧ರಿಂದ  ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿತ್ತು. ಆದರೆ ಇದೀಗ ಕೋವಿಡ್-೧೯ ಇಳಿಮುಖಗೊಂಡಿರುವುದರಿಂದ ಸರಕಾರದ ಮಾರ್ಗಸೂಚಿ ಪ್ರಕಾರ ಶ್ರೀ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ಸೋಮವಾರದಿಂದ ಅವಕಾಶ ಲಭ್ಯವಾಗಿದೆ. ಕ್ಷೇತ್ರದಲ್ಲಿ ಶ್ರೀ ದೇವರ ದರುಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಯಾವುದೇ ಸೇವೆಗಳು ಸರಕಾರದ ಮುಂದಿನ ಆದೇಶದ ತನಕ ನಡೆಯುವುದಿಲ್ಲ. ಮಂಗಳಾರತಿ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.


   ಎಲ್ಲಾ ಭಕ್ತರಿಗೆ ಬೆಳಗ್ಗೆ ೭.೦೦ರಿಂದ ಮಧ್ಯಾಹ್ನ ೧೧.೩೦ ತನಕ, ಮಧ್ಯಾಹ್ನ ೧೨.೧೫-೧.೩೦ ತನಕ  ದರುಶನಕ್ಕೆ ಅವಕಾಶವಿದೆ.ನಂತರ ೨.೩೦ಯಿಂದ ಸಂಜೆ ೬.೩೦ ತನಕ ಭಕ್ತರು ಶ್ರೀ ದೇವರ ದರುಶನ ಮಾಡಬಹುದು. ಮಂಗಳಾರತಿ ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ. ಈ ಸೇವೆಗೆ ಮಾತ್ರ ಅವಕಾಶವಿರುವುದರಿಂದ ಪ್ರತಿ ೧೫ ನಿಮಿಷಕ್ಕೊಮ್ಮೆ ಶ್ರೀ ದೇವರಿಗೆ ಮಂಗಳಾರತಿ ನಡೆಯಲಿದೆ.ಮಂಗಳಾರತಿಗೆ ಯಾವುದೇ ಪ್ರಸಾದ ನೀಡಲಾಗುವುದಿಲ್ಲ.ದೇವಳದ ವಸತಿ ಗೃಹದಲ್ಲಿ ತಂಗಲು ಅವಕಾಶವಿಲ್ಲ. ಗಂಧ ಪ್ರಸಾದ, ತೀರ್ಥ ಪ್ರಸಾದ, ಮೂಲಮೃತ್ತಿಕೆ ಪ್ರಸಾದ ನೀಡಲಾಗುವುದಿಲ್ಲ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
       ಭಕ್ತಾಧಿಗಳಿಗೆ ಬೋಜನ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಪಂಚಕಜ್ಜಾಯ, ಲಡ್ಡುಪ್ರಸಾದ ವಿತರಣೆಯಾಗುದಿಲ್ಲ. ದೇವಳದ ಮುಂಭಾಗದಲ್ಲಿ ಕಡ್ಡಾಯವಾಗಿ ಥರ್ಮಾಮೀಟರ್‌ನಿಂದ ತಪಾಸಣೆ ಮಾಡಲಾಗುವುದು.ಅಲ್ಲದೆ ಒಳಪ್ರವೇಶಿಸುವಾಗ ಸ್ಯಾನಿಟೈಸರ್ ನೀಡಲಾಗುವುದು.ಜ್ವರ,ಕೆಮ್ಮು, ಶೀತವಿರುವ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.
     ಶ್ರೀ ದೇವಳಕ್ಕೆ ರಾಜಗೋಪುರದ ಪ್ರಧಾನ ದ್ವಾರದ ಮೂಲಕ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ. ಉಳಿದ ದ್ವಾರದಲ್ಲಿ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಹೊರ ಬರಲು ಮತ್ತೊಂದು ದ್ವಾರವನ್ನು ಬಳಸಿಕೊಳ್ಳಲಾಗುವುದು. ಪ್ರಧಾನ ದ್ವಾರದ ಬಳಿಕ ಹೊರಾಂಗಣ ಮತ್ತು ಒಳಾಂಗಣಕ್ಕೆ ಪ್ರವೇಶಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚೌಕವನ್ನು ಬರೆಯಲಾಗಿದೆ.ಶ್ರೀ ದೇವಳದಹೊರಾಂಗಣ, ಒಳಾಂಗಣ ಸೇರಿದಂತೆ ದೇವಳದ ಸುತ್ತಲೂ ಚೌಕವನ್ನು ಬರೆಯಲಾಗಿದೆ.  ಭಕ್ತರು ಈ ಚೌಕದ ಮೂಲಕ ಸರದಿ ಸಾಲಿನಲ್ಲಿ ಮುಂದಡಿಯಿಡಬೇಕು.ಶ್ರೀ ದೇವಳದ ಪ್ರವೇಶದಿಂದ ಹೊರ ಬರುವ ತನಕವೂ ಭಕ್ತರು ಚೌಕದಲ್ಲಿ ಮುನ್ನಡೆಯಬೇಕು. ಈ ಮೂಲಕ ಭಕ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಆದಿ ಸುಬ್ರಹ್ಮಣ್ಯ ದೇವಸ್ಥಾನ ಪ್ರವೇಶಿಸುವಾಗಲೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ.ಕೋವಿಡ್ ೧೯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಭಕ್ತರು ಶ್ರೀ ದೇವರ ದರುಶನ ಪಡೆಯಲು ಬೇಕಾದ ಸೂಕ್ತ ವ್ಯವಸ್ಥೆಯನ್ನು ಶ್ರೀ ದೇವಳ ನಡೆಸಿದೆ.ಭಕ್ತರು ಶ್ರೀ ದೇವಳದೊಂದಿಗೆ ಸಹಕರಿಸಬೇಕು ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು.


   *ಸಿಬ್ಬಂದಿಗಳೊಂದಿಗೆ ಸಮಾಲೋಚನೆ*:
   ಶ್ರೀ ದೇವಳವು ಭಕ್ತರ ದರುಶನಕ್ಕೆ ತೆರೆಯುವ ಹಿನ್ನೆಲೆಯಲ್ಲಿ ಶ್ರೀ ದೇವಳದ ಸಿಬ್ಬಂದಿಯೊಂದಿಗೆ ಸಮಾಲೋಚನಾ ಸಭೆಯು ಆದಿತ್ಯವಾರ ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆಯಿತು. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ,  ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!