ಗುಂಡಿನ ಸದ್ದು ಸುಳ್ಯವನ್ನು ಮತ್ತೊಮ್ಮೆ ಬೆಚ್ಚಿ ಬೀಳಿಸಿದೆ. ಜೂ. 5 ರಂದು ರಾತ್ರಿ ಅಪರಿಚಿತ ತಂಡವೊಂದು ಯುವಕ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ದಾಳಿಗೆ ಒಳಗಾದ ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಆತನ ಕಾರಿಗೂ ಗುಂಡೇಟು ತಗುಲಿದೆ.
ಜಯನಗರ ನಿವಾಸಿ ಮಹಮ್ಮದ್ ಸಾಯಿ ಗುಂಡಿನ ದಾಳಿಗೆ ಒಳಗಾದವರು.
ಸುಳ್ಯದ ಜ್ಯೋತಿ ಸರ್ಕಲ್ ಸಮೀಪ ವೆಂಕಟರಮಣ ಸೊಸೈಟಿ ಬಳಿ ಸಾಯಿಯವರು ತನ್ನ ಹುಂಡೈ ಕ್ರೆಟಾ ಕಾರು ನಿಲ್ಲಿಸಿ ಪಕ್ಕದಲ್ಲಿದ್ದ ತನ್ನ ತಂಗಿ ಮನೆಗೆ ತೆರಳಿ ವಾಪಸ್ಸು ಕಾರಿನ ಬಳಿ ತಲುಪುತ್ತಿದ್ದಂತೆ ಗುಂಡಿನ ದಾಳಿ ನಡೆದಿದೆ.
ಮಡಿಕೇರಿ ರಿಜಿಸ್ಟ್ರೇಷನಿನ ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಕಾರು ಬಳಿ ನಿಂತಿದ್ದ ಸಾಯಿಯವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ.
ಜೂ. 5 ರಂದು ಮಹಮ್ಮದ್ ಸಾಯಿ ಅವರ ಪತ್ನಿಯ ತಂಗಿಯ ವಿವಾಹ ಬಂಟ್ವಾಳದಲ್ಲಿ ಜರುಗಿತ್ತು. ಇದರಲ್ಲಿ ಸಾಯಿಯವರು ಭಾಗವಹಿಸಿ ರಾತ್ರಿ 10.30ರ ಸುಮಾರಿಗೆ ಅವರು ಸುಳ್ಯದ ಮೊಗರ್ಪಣೆಯಲ್ಲಿರುವ ವೆಂಕಟರಮಣ ಸೊಸೈಟಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಕಾರು ನಿಲ್ಲಿಸಿದ್ದಾರೆ. ಬಳಿಕ ಅವರು ಪಕ್ಕದಲ್ಲಿರುವ ತನ್ನ ತಂಗಿಯ ಮನೆಯ ಬಳಿಗೆ ಹೋಗಿ ವಾಪಸ್ಸು ತನ್ನ ಮನೆಗೆ ಹೋಗುವ ಸಲುವಾಗಿ ತನ್ನ ಕಾರಿನ ಬಳಿಗೆ ಬಂದಿದ್ದಾರೆ. ಕಾರಿನ ಡೋರ್ ತೆರೆಯುತ್ತಿದ್ದ ವೇಳೆ ಜ್ಯೋತಿ ಸರ್ಕಲ್ ಕಡೆಯಿಂದ ಸ್ಕಾರ್ಪಿಯೋ ಕಾರೊಂದು ಬಂದಿದೆ.
ಈ ಕಾರಿನಲ್ಲಿದ್ದ ನಾಲ್ವರು ಅಪರಿಚಿತರು ಸಾಯಿಯವರನ್ನು ಹತ್ಯೆ ಮಾಡುವ ಉದ್ದೇಶದಿಂದ ಗುಂಡಿನ ದಾಳಿ ನಡೆಸಿದ್ದಾರೆ.ಗುಂಡು ಸಾಯಿ ಅವರ ಬೆನ್ನಿನ ಎಡ ಬದಿಗೆ ತಾಗಿದೆ ಹಾಗೂ ಕಾರಿನ ಬಲ ಬದಿಯ ಎರಡು ಡೋರ್ಗಳ ಮದ್ಯಕ್ಕೆ ಗುಂಡು ತಾಗಿದ ಗುರುತು ಕಾಣಿಸಿದೆ ಎಂದು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳು ಸಾಯಿಯವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡು ಹಾರಿಸಿದ ದುಷ್ಕರ್ಮಿಗಳ ವಾಹನ ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.