
ಕಲ್ಮಕಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಶ್ರೀಮತಿ ಬೊಳಿಯಮ್ಮ ಡಿ. ನವಂಬರ್ 30 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರು ತಾಲೂಕಿನ ವಿವಿಧ ಶಾಲೆಗಳಲ್ಲಿ ಸುಮಾರು 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಪೋಷಕರ ಮೆಚ್ಚುಗೆ ಗಳಿಸಿದ್ದರು. 1982 ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಇವರು ಭೂತಕಲ್ಲು, ಮೈತಡ್ಕ, ದೇವಚಳ್ಳ, ಹರಿಹರ ಪಲ್ಲತಡ್ಕ, ಬಂಗ್ಲೆಗುಡ್ಡೆ ಶಾಲೆಗಳಲ್ಲಿ ಸೇವೆ ಸಲ್ಲಿಸಿ, 2008 ರಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿಹೊಂದಿ ವಳಲಂಬೆ ಮತ್ತು ಕಲ್ಮಕಾರು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಂಗಮಂದಿರ ನಿರ್ಮಾಣ, ಎರಡು ಬಾರಿ ತಾಲೂಕು ಮಟ್ಟದ ಕ್ರೀಡಾಕೂಟ ಸಂಘಟನೆ, ಮೂರು ಬಾರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಶಾಲಾ ವಾರ್ಷಿಕೋತ್ಸವ,ಶೈಕ್ಷಣಿಕ ಪ್ರವಾಸ, ಶಾಲಾ ಆವರಣ, ಅಡಿಕೆ ತೋಟ, ಹಸಿರು ವನ, ತರಕಾರಿ ಕೈತೋಟ ರಚನೆ, ಕೆ.ವಿ.ಜಿ.ಮೆಡಿಕಲ್ ಕ್ಯಾಂಪ್ ಮಾಡಲು ಶ್ರಮಿಸಿದ್ದಾರೆ.
ದೇವರಗುಂಡ ದಿ.ಅಣ್ಣಕೂಸು ಗೌಡರ ಪುತ್ರಿಯಾಗಿರುವ ಇವರ ಪತಿ ಗಣಪತಿ ಗೌಡ ಚಾಂತಾಳ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪುತ್ರರಾದ ಸಚಿನ್ ಚಾಂತಾಳ ಉದ್ಯಮಿಯಾಗಿದ್ದು ಅಡ್ಕಾರ್ ನಲ್ಲಿ ನೇಸರ ಮಿನರಲ್ ವಾಟರ್ ಇಂಡಸ್ಟ್ರೀಸ್ ನಡೆಸುತ್ತಿದ್ದಾರೆ. ಇನ್ನೋರ್ವ ಪುತ್ರ ಸವಿನ್ ಚಾಂತಾಳ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.