Ad Widget

ಅ.26: ಅರೆಭಾಷೆ ಅಕಾಡೆಮಿಯಿಂದ ಬಡ್ಡಡ್ಕದಲ್ಲಿ “ಅರೆಭಾಷೆ ಗ್ರಾಮೋತ್ಸವ” – ಕಾರ್ಯಕ್ರಮದ ವಿವರ ನೀಡಿದ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅಕ್ಟೋಬರ್ 26ರ ಭಾನುವಾರದಂದು ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರ ಬಡ್ಡಡ್ಕ, ಆಶೆಟ್ಟಿ ಮತ್ತು ಕಲ್ಲಪ್ಪಳ್ಳಿ ವ್ಯಾಪ್ತಿಯಲ್ಲಿ ‘ಅರೆಭಾಷೆ ಗ್ರಾಮೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅರೆಭಾಷೆ ಮತ್ತು ಅರೆಭಾಷೆ ಸಂಸ್ಕೃತಿ ಆಚಾರ ವಿಚಾರಗಳು ಮರೆತು ಹೋಗದಂತೆ ಹಾಗೂ ಭಾಷೆಯ ಮೇಲೆ ಪ್ರೀತಿ ಅಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ಪೀಳಿಗೆಗೆ ಭಾಷೆಯನ್ನು ಕೊಂಡೊಯ್ಯಲು ಭಾಷೆಯನ್ನು ಉಳಿಸಿ ಬೆಳೆಸಿ ಹಬ್ಬಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಅಕಾಡೆಮಿಯು ರೂಪುಗೊಳಿಸಿದೆ.

. . . . . . . . .

ಇಡೀ ದಿನ ನಡೆಯುವ ಕಾರ್ಯಕ್ರಮವನ್ನು ಪೂರ್ವಾಹ್ನ ಗಂಟೆ 9.30ಕ್ಕೆ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿ ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ನಿರ್ದೇಶಕರಾದ ಪುರುಷೋತ್ತಮ ಕೋಲ್ಟಾರ್‌ರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಭಾಗೀರಥಿ ಪತ್ತುಕುಂಜ, ಶಶಿಕಲಾ ದೋಣಿಮೂಲೆ, ಶಾಂತಪ್ಪ ಬಡ್ಡಡ್ಕ, ಕಲ್ಲಪ್ಪಳ್ಳಿ ಗ್ರಾಮಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಆಲುಗುಂಜ ಇವರುಗಳು ಉಪಸ್ಥಿತರಿರುತ್ತಾರೆ.

. . . . . . .

ಗ್ರಾಮೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು ಸಾಂಪ್ರದಾಯಿಕ ರೀತಿಯ ಬುಟ್ಟಿ ಹೆಣೆಯುವಿಕೆ, ಗೆರಸೆ ಹೆಣೆಯುವಿಕೆ, ತೆಂಗಿನ ಗರಿಯ ತಟ್ಟಿ ಹೆಣೆಯುವಿಕೆ, ಕಂಗಿನ ಹಾಳೆಯಲ್ಲಿ ಕುಳಿತು ಎಳೆಯುವುದು, ಕುಟ್ಟಿದೊಣ್ಣೆ ಆಟ, ಕುಂಟಾ ಬಿಲ್ಲೆ ಮೊದಲಾದ ಪ್ರಾತ್ಯಕ್ಷಿಕೆಗಳು ಹಾಗೂ ಸಾಂಪ್ರದಾಯಿಕ ವಸ್ತುಗಳ ಪ್ರದರ್ಶವೂ ನಡೆಯಲಿದೆ.

ಉತ್ಸವದ ಅಂಗವಾಗಿ ಅರೆಭಾಷೆ ಚಲನಚಿತ್ರಗಳಾದ ಸುಧೀರ್ ಏನೆಕಲ್ ನಿರ್ದೇಶನದ ‘ಕೇಸ್ ಪುಸ್ಕ’ ಹಾಗೂ ಸಂತೋಷ್ ಮಾಡ ನಿರ್ದೇಶನದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಮೂಗಜ್ಜನ ಕೋಳಿ ಚಿತ್ರಗಳ ಪ್ರದರ್ಶನ ಇರುತ್ತದೆ.

ಅಪರಾಹ್ನ ಗಂಟೆ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ಪೂರ್ವಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ ಇವರು ದೀಪಪ್ರಜ್ವಲನೆ ಮಾಡಲಿದ್ದಾರೆ. ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಧ್ಯಾಪಕರಾದ ಸಂಜೀವ ಕುದ್ದಾಜೆ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಅಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾವಸಂತ್, ಆಲೆಟ್ಟಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕುಂಚಡ್ಕ, ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷ ಅರುಣ್ ರಂಗತ್ತಮಲೆ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಜಿ. ದೇವಪ್ಪ ನಾಯ್, ಸಾಹಿತಿ ಹಾಗೂ ಸಂಶೋಧಕರಾದ ಡಾ.ವಿದ್ಯಾಧರ ಬಡ್ಡಡ್ಕ, ಶ್ರೀ ರಾಮಕೃಷ್ಣ ವಿದ್ಯಾ ಸಂಘ (ರಿ) ಬಡ್ಡಡ್ಕ ಇದರ ಅಧ್ಯಕ್ಷರಾದ ಡಾ| ಸಾಯಿಗೀತ ಜ್ಞಾನೇಶ್, ಅಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ ಇವರುಗಳು ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading