
ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದಲ್ಲಿ 2021 –22ನೆಯ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭವು ನಡೆಯಿತು. ವಿದ್ಯಾರ್ಥಿ ಸರಕಾರದ ರಾಜ್ಯಪಾಲರಾದ ಶಾಲೆಯ ಮುಖ್ಯೋಪಾಧ್ಯಾಯರು ಸಮಾರಂಭದಲ್ಲಿ ಭಾಗವಹಿಸಿ ಸಭಾಪತಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಂಪುಟ ದರ್ಜೆಯ ಸಚಿವರುಗಳಿಗೆ ಶಾಲಾ ಸಂವಿಧಾನದಂತೆ ಸಂಸ್ಕೃತ , ಕನ್ನಡ ,ಇಂಗ್ಲಿಷ್ ,ಹಿಂದಿ ,ತುಳು ಭಾಷೆಗಳಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ರಾಜ್ಯಪಾಲರ ನೆಲೆಯಿಂದ ಮುಖ್ಯೋಪಾಧ್ಯಾಯರು ಮಾತನಾಡುತ್ತಾ ಶಾಲಾ ಸಂವಿಧಾನದ ರಕ್ಷಣೆ ,ವಿದ್ಯಾರ್ಥಿ ಸರಕಾರದ ಕರ್ತವ್ಯ ,ಶಾಲೆಯ ವ್ಯವಸ್ಥೆ ಮತ್ತು ಜವಾಬ್ದಾರಿಯುತ ವಿದ್ಯಾರ್ಥಿಯಾಗಿ ಪ್ರತಿಯೊಬ್ಬರೂ ಶಾಲಾ ನಿಯಮದಂತೆ ನಡೆದುಕೊಳ್ಳಬೇಕಾದ ಅಗತ್ಯತೆಯನ್ನು ವಿವರಿಸಿದರು. ವಿಪಕ್ಷ ನಾಯಕಿ ಮತ್ತು ಇತರ ಸದಸ್ಯರಿಗೆ ಸಭಾಪತಿ ಯಿಂದ ವಿವಿಧ ಭಾಷೆಗಳಲ್ಲಿ ಪ್ರತಿಜ್ಞೆಯನ್ನು ಬೋಧಿಸಿದರು. ಮುಖ್ಯಮಂತ್ರಿಯಾದ ಮಿಥುನ್ ಕೆ. ಎ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯವನ್ನು ಮಂಡಿಸಿದರು. ವಿಪಕ್ಷ ನಾಯಕಿ ಖುಷಿ ಪಿ.ಎಸ್ ವಂದನಾ ನಿರ್ಣಯವನ್ನು ಅನುಮೋದಿಸಿದರು. ಮುಖ್ಯಮಂತ್ರಿಯವರು ವಿವಿಧ ಖಾತೆಗಳನ್ನು ಸಂಪುಟ ದರ್ಜೆ ಸಚಿವರಿಗೆ ಹಂಚಿಕೆ ಮಾಡಿ ಸದನವನ್ನುದ್ದೇಶಿಸಿ ಮಾತನಾಡಿದರು. ವಿಪಕ್ಷ ನಾಯಕಿ ಸರಕಾರದ ಕಾರ್ಯಕಲಾಪಗಳಿಗೆ ಪೂರ್ಣಪ್ರಮಾಣದ ಬೆಂಬಲವನ್ನು ತನ್ನ ಭಾಷಣದಲ್ಲಿ ಘೋಷಿಸಿದರು. ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು .ಶಿಕ್ಷಕರು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.