Ad Widget

ಪಾಠದಲ್ಲಿ ಹೇಳದ ! ಇತಿಹಾಸ ಮರೆಯದ ”ಜಗತ್ತಿನ ಸರ್ವ ಶ್ರೇಷ್ಠ ವೀರ ಪುರುಷ ”

ಭಾಷೆ ಪ್ರಾಂತ್ಯಗಳಿಗೆ ಸೀಮಿತಮಾಡಿ ಎನ್ನಡ ಎಕ್ಕಡಗಳ ಮಧ್ಯೆ ಮಾತೃ ಭಾಷೆ ಕನ್ನಡವನ್ನೇ ಮರೆಯುತ್ತಿರುವ ನಮಗೆ ನಮ್ಮ ಭಾಷಪ್ರಾಂತ್ಯಕ್ಕೆ ಸೇರದ ಸರ್ವ ಶ್ರೇಷ್ಠ ವೀರ ಪುರುಷನ ಬಗ್ಗೆ ಗೊತ್ತಿರಲು ಹೇಗೆ ಸಾಧ್ಯ? ಪರಕೀಯ ಆಕ್ರಮಣಕಾರರನ್ನು ವೈಭವಿಕರಿಸಿ ಅಶೋಕನಿಗಿಂತ ಅಕ್ಬರ್ ದಿ ಗ್ರೇಟ್ ಮತ್ತೆ ಉಳಿದವರು ದಾರಿ ತಪ್ಪಿದ ದೇಶ ಭಕ್ತರು ಎಂದು ಹೇಳುವ ಪಠ್ಯಪುಸ್ತಕ ದಲ್ಲಿರುವ ಹಾಗೇಯೇ ಕಂಠಪಾಠಮಾಡಿ ಒಪ್ಪಿಸುವ ನಮಗೆ ಸ್ವಧರ್ಮ ಸ್ವರಾಷ್ಟದ ರಕ್ಷಕರು ರಾಷ್ಟಪುರುಷರಾಗಿ ಉಳಿಯುವುದಾದರು ಹೇಗೆ?

ಇಂಗ್ಲೆಂಡಿನ ನಿಯತಕಾಲಿಕೆಯೊಂದು ”ಪ್ರಪಂಚದ ಸರ್ವ ಶ್ರೇಷ್ಠ ವೀರ ಪುರುಷ” ಯಾರೆಂದು?! ಸಮೀಕ್ಷೆ ನಡೆಸಿ ಸೀಸರ್, ಅಲೆಕ್ಸಾಂಡರ್, ನೆಪೋಲಿಯನ್ ನಂತಹ ವೀರರ ಜೀವನ ಚರಿತ್ರೆಯನ್ನು ಅಧ್ಯಯನಮಾಡಿ ಜಗತ್ತಿನ ಸರ್ವ ಶ್ರೇಷ್ಠ ವೀರ ಛತ್ರಪತಿ ಶ್ರೀ ಶಿವಾಜಿಯೆ ಎಂದು ದಾಖಲಿಸಿತು!. 800 ವರ್ಷ ಮೋಘಲರು 300 ವರ್ಷ ಬ್ರಿಟೀಷರು ದೇಶವಾಳಿದರು ಯಾರೊಬ್ಬ ಬಾದಷಾಹನಾಗಲಿ ಗವರ್ನರ್ ಜನರಲ್ ಆಗಲಿ ಈ ಸ್ಥಾನ ಪಡೆಯುವ ಅರ್ಹತೆಯನ್ನು ಪಡೆಯಲಿಲ್ಲ .ನಾನು ಇಂದು ಹೇಳುವ ಪಠ್ಯಪುಸ್ತಕದಲ್ಲಿ ಹೇಳದ ಇತಿಹಾಸ ಮರೆಯದ ”ಜಗತ್ತಿನ ಸರ್ವ ಶ್ರೇಷ್ಠ ವೀರ ಪುರುಷ ಛತ್ರಪತಿ ಶ್ರೀ ಶಿವಾಜಿ ಮಹಾರಾಜರು”.

ರಾಷ್ಟ್ರಮಾನಸದ ಮನೆ ಮಕ್ಕಳ ಹೃದಯ ಸಿಂಹಾಸನದಲ್ಲಿ ಆರಾಧಿಸಲ್ಪಡುವ ಸಕಲ ಸದ್ಗುಣಗಳ ಯಶಸ್ಸು ಸಾಧನೆಗಳ ಮೇರು ಶಿಖರ, ವಿಧರ್ಮಿಯರ ಅಧರ್ಮವನ್ನಾಳಿಸಿ ಧರ್ಮ ಸ್ಥಾಪನೆಮಾಡಿದ ಧರ್ಮಸಂಸ್ಥಾಪನಚಾರ್ಯ, ಮಾತಾ ಭಾಗಿನಿಯರ ಮೇಲಾದ ಅನಾಚಾರ ಅತ್ಯಾಚಾರಗಳಿಂದ ಅವರ ಮಾನ ಪ್ರಾಣ ಮಾಂಗಲ್ಯವನ್ನು ಉಳಿಸಿದ ಧರ್ಮ ರಕ್ಷಕ, ಸ್ವರಾಜ್ಯ ಮತ್ತು ಸ್ವಧರ್ಮ ಪುನರ್ ಪ್ರತಿಷ್ಠಾಪನೆ ಮಾಡಲು ಅವತರಿಸಿದ ಯುಗಾವತಾರವೇ ಶಿವ ಸ್ವರೂಪಿ ಶ್ರೀ ಶಿವಾಜಿ ಮಹಾರಾಜರು.

ರಕ್ಕಸತಂಗಡಿ ಕದನದಲ್ಲಿ ವಿಜಯ ನಗರ ಸಾಮ್ರಾಜ್ಯದ ಅವನತಿಯೊಂದಿಗೆ ಸ್ವರಾಜ್ಯ ಸೂರ್ಯ ಪಶ್ಚಿಮದ ಕಡಲಲ್ಲಿ ಅಸ್ತಂಗತನಾದ ನಂತರ ನಾಡಿಗೆ ಅಂಧಕಾರ ಕವಿಯಿತು. ಇಂದ್ರಪ್ರಸ್ಥದ ಸಿಂಹಾಸನ ಮೋಘಲರ ವಶವಾಯಿತು ದಕ್ಷಿಣದಲ್ಲಿ ಆದಿಲ್ ಷಾಹಿ,ನಿಜಮ್ ಷಾಹಿ ಜೋತೆಗೆ ಪ್ರೆಂಚರು, ಪೊರ್ಚುಗೀಸರು, ಬ್ರಿಟೀಷರು, ಡಚ್ಚರು ಅಷ್ಟದಿಕ್ಕುಗಳಲ್ಲಿ ಸ್ವರಾಷ್ಟದ ಮೇಲೆ ಸಂಚು ರೂಪಿಸಿ ಹೊಂಚುಹಾಕುತ್ತೀರುವ ವೇಳೆಯಲ್ಲಿ ಸಹ್ಯಾದ್ರಿಯ ಮಡಿಲಲ್ಲಿ ಫಾಲ್ಗುಣ ಬಹುಳ ತದಿಗೆಯ ಅಮೃತಗಳಿಗೆಯಲ್ಲಿ ಶಹಾಜಿ ಮತ್ತು ಜೀಜಾಬಾಯಿ ದಂಪತಿಗಳಿಗೆ ಶಿವಾಜಿ ಎಂಬ ಪುತ್ರರತ್ನದ ಜನನವಾಯಿತು ತನ್ನ ಪ್ರತಿಭೆ ಪೌರುಷಗಳಿಂದ ಸಹ್ಯಾದ್ರಿಯ ಮೇಲೇರಿ ನಿಂತ ಸ್ವರಾಜ್ಯ ಸೂರ್ಯ ಪ್ರಖರವಾದ ಬೆಳಕನ್ನು ಬೀರಿ ಸ್ವರಾಜ್ಯಕ್ಕೆ ಕವಿದಿದ್ದ ಕತ್ತಲನ್ನು ದೂರ ಮಾಡಿದ ಚರಿತ್ರೆಯೇ ರೋಚಕ!.

ಶಿವಾಜಿ ಎಂಬ ಮೂರಾಕ್ಷರದ ಪದ ಕೇಳಿದ ತಕ್ಷಣ ಮೋಘಲ್ ಷಾಹಿಗಳು ಮತ್ತು ಆದಿಲ್ ಷಾಹಿಗಳು ನಿದ್ದೆಯಲ್ಲಿ ಬೆವರಿ ಹಗಲಿನಲ್ಲಿ ಹೆದರಿ ಬೆನ್ನು ತೋರಿಸಿ ಓಡಿಹೋದದಕ್ಕೆ ರಣಾಂಗಣವೇ ಸಾಕ್ಷಿ. ತುಜಾಳ ಪುರದ ಅಷ್ಟಭುಜದ ಭವಾನಿಯ ವಿಗ್ರಹ ಭಗ್ನಮಾಡಿ ‘ಎಲ್ಲಿ ನಿನ್ನ ಮಹಿಮೆ ತೋರಿಸು’ ಎಂದು ಕಿರುಚಿದ್ದ ಅಫ್ಜಲ್ ಖಾನನನ್ನು ಪ್ರತಾಪಗಢದಲ್ಲಿ ಸಾಕ್ಷತ್ ನರಸಿಂಹನ ಅವತಾರದಲ್ಲಿ ಹೊಟ್ಟೆಯಿಂದ ಕರುಳನ್ನು ಕಿತ್ತು ತಲೆಯನ್ನು ಕತ್ತರಿಸಿ ದೇವಿಗೆ ಮಾಡಿದ ಅಪಮಾನಕ್ಕೆ ಭವಾನಿ ಖಡ್ಗದಲ್ಲಿ ಶತ್ರುವಿನ ಸಂಹಾರ ಮಾಡಿ ಮಹಿಮೆ ತೋರಿಸಿದರು. ಬೇಟೆ ಸಿಕ್ಕಿತು ಇನ್ನೂ ಹಿಡಿದು ಬಲಿಕೊಡುವುದೆಂದು ಹುಲುಬುತ್ತಿದ್ದ ಸಿದ್ಧಿ ಜೌಹರನಿಗೆ ಶಿವಾಜಿ ಹೆಸರಿನ ಕ್ಷೌರಿಕನನ್ನು ಹಿಡಿದು ತಂದದನ್ನು ಕಂಡು ಗಡ್ಡಕ್ಕೆ ಬೆಂಕಿ ಬಿದ್ದಂತಾಯಿತು ಛತ್ರಪತಿ ಶಿವಾಜಿ ಪನ್ನಾಳಗಢವನ್ನು ಸೇರಿದ್ದರು ಬಂದದಾರಿಗೆ ಸುಂಖವಿಲ್ಲವೆಂದು ಸಿದ್ಧಿ ಜೌಹರ ಮನೆಯದಾರಿ ಹಿಡಿದ.
ಶಾಯಿಸ್ತೆಖಾನನ ಮೂರು ಬೆರಳನ್ನು ಕತ್ತರಿಸಿ ಸರಿಯಾಗಿ ಶಾಸ್ತಿ ಮಾಡಿದ್ದರು. ಮೋಸದಿಂದ ತನ್ನ ಆಸ್ಥಾನಕ್ಕೆ ಕರೆಸಿಕೊಂಡು ಅವಮಾನಿಸಿದ್ದ ಔರಂಗಜೇಬನಿಗೆ ಆಸ್ಥಾನದಿಂದ ಮೀಠಾಯಿತುಂಬಿದ ಬುಟ್ಟಿಯಲ್ಲಿ ಕುಳಿತು ಸ್ವರಾಜ್ಯಕ್ಕೆ ಪರಾಗಿಬಂದರು ಈ ಸುದ್ದಿ ಕೇಳಿದ ದಿಲ್ಲಿಯ ಬಾದ್ ಷಾಹ ಇಲಿಯಂತಾಗಿದ್ದ ಮರಳಿ ಸ್ವರಾಜ್ಯಕ್ಕೆ ಬಂದ ಶಿವಾಜಿ ಮುವತ್ತೇಳು ಕೋಟೆಗಳನ್ನು ಸ್ವರಾಜ್ಯಕ್ಕೆ ಸೇರಿಸಿಕೊಂಡರು ಈ ಎಲ್ಲ ವಿಜಯ ವಿಕ್ರಮಗಳಿಗೆಲ್ಲ ತಾಯಿ ಜೀಜಾಬಾಯಿ ತನ್ನ ಕಂದನಿಗೆ ಊಟಮಾಡಿಸುವಾಗ ಹೇಳಿದ ರಾಮ-ಕೃಷ್ಣರ ಭೀಮಾರ್ಜುನರ ಶೌರ್ಯದ ಕಥೆಯ ಜೋತೆಗೆ ಸ್ವರಾಜ್ಯ ಸ್ವಧರ್ಮದ ನಿಷ್ಠೆಯನ್ನು ಉಣಿಸಿದರ ಫಲಿತಾಂಶವೇ ಆಗಿತ್ತು ! ಸ್ವರಾಜ್ಯದ ರಕ್ಷಣೆಯು ಆಯಿತು!.

ಪೃಥ್ವೀರಾಜ್ ಚವ್ಹಾಣನ ಅಂತ್ಯದ ನಂತರ ಮೋಘಲರ ವಶವಾದ ದೆಲ್ಲಿಯ ಹಿಂದೂ ಸಿಂಹಾಸನ ‘ದಿಲ್ಲಿಶ್ವರೋ ವಾ ಜಗದೀಶ್ವರೋ ವಾ’ ಎಂಬ ದಿಲ್ಲಿಶ್ವರನೇ ಜಗದೀಶ್ವರನೆಂಬ ಜನರಲ್ಲಿ ಮೂಡಿದ್ದ ದೆಲ್ಲಿಯ ಸಿಂಹಾಸನ ನಿಷ್ಠೆಯನ್ನು ಜನಮಾನಸದಿಂದ ತೆಗೆದು ಹಾಕಿ ಹಿಂದೂ ಸಿಂಹಾಸನವನ್ನು ಪುನರ್ ಸ್ಥಾಪನೆಮಾಡಿ ‘ಛತ್ರಪತಿ’ ಯೆಂಬ ಬಿರುದಿನೊಂದಿಗೆ ಸಿಂಹಾಸನ ರೂಡರಾದರು ಮಾವಳಿ ವೀರರ ಗುಂಪು ಕಟ್ಟಿಕೊಂಡು ಸಹ್ಯಾದ್ರಿಯ ಸಾಲಿನಲ್ಲಿ ಕಟ್ಟಿದ ಕೋಟೆ ಬರಿಯ ಕಲ್ಲಿನ ಕೋಟೆಯಾಗಿರಲಿಲ್ಲ ಅದು ಅದಮ್ಯ ಪ್ರೀತಿಯಿಂದ ಕಟ್ಟಿದ ಸ್ವರಾಜ್ಯದ ನೇತಾರರ ಶೌರ್ಯ ಸಾಹಸದಿಂದ ಕಟ್ಟಿದ ಕೋಟೆಯಾಗಿತ್ತು ಬಾಲ್ಯದಲ್ಲಿ ಕೋಟೆನ್ನು ಕಟ್ಟಿ ಮೋಘಲರು ಸೋಲುವವರು ಮರಾಠರು ಗೆಲ್ಲುವವರು ಎಂದು ಆಡಿದ ಆಟದ ನಿರ್ಣಾಯಕ ಫಲಿತಾಂಶವೇ ಇದಾಗಿತ್ತು!.

ಅವಶ್ಯಕತೆಗಳಿಗೆ ತಕ್ಕಂತೆ ಅನಿವಾರ್ಯ ಬದಲಾವಣೆಯನ್ನು ಮಾಡಿದರು ಸಮುದ್ರ ಬಂಧಿಯನ್ನು ತಗೆದು ಸಿಂಧೂ ದುರ್ಗಾವನ್ನು ನಿರ್ಮಿಸಿದರು, ಶುದ್ಧಿ ಕಾರ್ಯಮಾಡಿ ಮತಾಂತರವಾದ ಹಿಂದೂಗಳನ್ನು ಪುನಃ ಮಾತೃ ಧರ್ಮಕ್ಕೆ ಕರೆತಂದರು, ಹಣದ ಬದಲಾಗಿ ಧಾನ್ಯದ ಮೂಲಕ ತೆರಿಗೆ ಕಟ್ಟಲು ಆಜ್ಞೆಮಾಡಿದರು, ಜಹಗೀರು ಪದ್ಧತಿಯನ್ನು ನೀಷೆದಿಸಿದರು, ಯುಧ್ಧದಲ್ಲಿ ಸೇರೆಸಿಕ್ಕ ಮುಸ್ಲಿಂ ಯುವತಿಯರನ್ನು ಸಹೋದರಿಯಂತೇ ಕಂಡು ಬಿಟ್ಟುಕಳುಹಿಸಿದರು, ಮುಸಲ್ಮಾನರು ಮತ್ತು ಕ್ರೈಸ್ತ ಧರ್ಮದವರಿಗು ಸ್ವರಾಜ್ಯದಲ್ಲಿ ಸ್ಥಾನ ಕಲ್ಪಿಸಿ ಸಮಾಜ ಸುಧಾರಕರನಂತೆ ಕಂಡರು ಉಳಿದ ಪರಕೀಯ ರಾಜರುಗಳು ಇದಕ್ಕೆಲ್ಲ ವಿರುದ್ಧವಾಗಿ ಕಂಡರು ಅವರನ್ನು ಪಠ್ಯಪುಸ್ತಕದಲ್ಲಿ ವೈಭವಿಕರಿಸಿದ್ದು ಯಾಕೆ? ನಮಗೆ ಸಿಗುತ್ತಿರುವ ಶಿಕ್ಷಣದಲ್ಲಿನ ಕೊರತೆಯೇ ಇದಲ್ಲವೇ!?

ಸ್ವಾಮಿ ವಿವೇಕಾನಂದರಂತಹ ವೀರ ಸಂನ್ಯಾಸಿ ಶಿವಾಜಿ ಕುರಿತು ‘ರಾಷ್ಟ್ರ ಧರ್ಮ ಅವನತಿಗೆ ತಲುಪಿದಾಗ ಅಧರ್ಮವನ್ನಾಳಿಸಿ ಧರ್ಮ ಸ್ಥಾಪನೆಮಾಡಿದ ಯುಗಪುರುಷ ಪ್ರತ್ಯಕ್ಷ ಶಿವನ ಅವತಾರ ಭಾರತದ ಭವಿತವ್ಯದ ಆಶಾದೀಪ’ ಎಂದು ಹೇಳಿದ್ದರು. ಭೂಷಣ ಕವಿಯು ‘ಕಾಶಿಜಿ ಕೀ ಕಲಾ ಜಾತಿ ಮಥುರ ಮಸಜೀದ ಹೋತಿ, ಶಿವಾಜಿ ನ ಹೊತೋ ತೋ ಸುನ್ನತ ಹೋತ ಸಬಕೀ’. ಶಿವಾಜಿ ಅವತಾರ ಆಗದೆ ಇದಿದ್ದರೆ ಸಂಪೂರ್ಣ ಭಾರತವೇ ಇಸ್ಲಾಂಮಿಕರಣವಾಗುತಿತ್ತು ಅಂತಹ ಸಂದರ್ಭದಲ್ಲಿ ರಾಷ್ಟ್ರವನ್ನು ರಕ್ಷಿಸಿದ ರಾಷ್ಟ್ರ ರಕ್ಷಕನ ಬಗ್ಗೆ ಯಾಕೆ ಪಠ್ಯಪುಸ್ತಕದಲ್ಲಿ ಹೇಳಿಲ್ಲ ಹೇಳಿದರು ಎರಡು ಮೂರು ಪುಟಗಳಿಗೆ ಮಾತ್ರ ಸೀಮಿತ ಏಕೆ? ಇತಂಹ ವೀರ ಪುರುಷನ ಆದರ್ಶ ನಮ್ಮ ಮಕ್ಕಳಿಗೆ ಬೇಡವೇ? ಇನ್ನಾದರೂ ಭಾಷೆ ಪ್ರಾಂತ್ಯದ ಎಲ್ಲೆಯನ್ನು ಮೀರಿ ವೀರ ಪುರುಷರ ಆದರ್ಶಗಳನ್ನು ಕಲಿಯುವ. ಇಂಗ್ಲೆಂಡಿನ ನಿಯತಕಾಲಿಕೆಗೆ ಗೊತ್ತಾದ ವೀರ ಪುರುಷನ ಆದರ್ಶಗಳು ನಮ್ಮ ಮನೆಯ ಮಕ್ಕಳಿಗೂ ಗೊತ್ತಾಗಲಿ.ವಿಯೆಟ್ನಾಂನ ಪ್ರಧಾನಿ ನಮ್ಮ ದೇಶಕ್ಕೆ ಬಂದಾಗ ಗಾಂಧೀ ಪ್ರತೀಮೆಗೆ ನಮಸ್ಕಾರಿಸಿದ ನಂತರ ಶಿವಾಜಿಯ ಪ್ರತಿಮೆ ಎಲ್ಲಿದೆ ಎಂದು ಕೇಳಿದರು ಅದು ಪುಣೆಯಲ್ಲಿದೆ ಎಂದು ತಿಳಿದು ಅಲ್ಲಿಗೆ ಬಂದು ಮಣ್ಣನ್ನು ಹಣೆಗೆ ಹಚ್ಚಿಕೊಂಡರು ಏಕೆಂದರೆ ಅವರ ಸ್ವಾತಂತ್ರ್ಯ ಹೋರಾಟಕ್ಕೆ ಶಿವಾಜಿಯ ರಾಜನೀತಿಯೇ ಪ್ರೇರಣೆಯಾಗಿತ್ತು ಆದರೆ ನಮ್ಮ ದೇಶದ ಮನೆ ಮಕ್ಕಳೆ ಇಂತಹ ಪರಾಕ್ರಮಿಯನ್ನು ಮರೆತಿರುವುದು ಆತ್ಮ ವಿಸ್ಮೃತಿಯಲ್ಲದೆ ಮತ್ತೇನು?.

ಲೇಖನ : ಪದ್ಮಕುಮಾರ್ ಗುಂಡಡ್ಕ , ರಾಜ್ಯಶಾಸ್ತ್ರ ಉಪನ್ಯಾಸಕರು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!