Ad Widget

“ಕೇಂದ್ರದಲ್ಲಿ ಆಡಳಿತ ಕೈತಪ್ಪಿದ  ಹತಾಶ ಮನೋಭಾವದಲ್ಲಿರುವ  ಕಾಂಗ್ರೆಸ್ಸಿನಿಂದ ನಿರಂತರ ಸುಳ್ಳು ಅಪಪ್ರಚಾರ” ; “ಮಹಾತ್ಮಾ ಗಾಂಧೀಜಿ ಅವರ ಕನಸು ನನಸು ಮಾಡುವ ಕಾಂಗ್ರೆಸ್ ಕರ್ನಾಟಕವನ್ನು  ಕುಡುಕರ ರಾಜ್ಯವಾಗಿಸಿದೆ” ; ಕಾಂಗ್ರೆಸ್ ಸಂಗ್ರಾಮ್ ಪಾದಯಾತ್ರೆ ವಿರುದ್ಧ ಬಿಜೆಪಿ  ಎಂ.ಎಲ್.ಸಿ. ಪ್ರತಾಪ್ ಸಿಂಹ ನಾಯಕ್ ಪತ್ರಿಕಾಗೋಷ್ಠಿ

“ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2047ರ ವಿಕಸಿತ ಭಾರತ ಕಲ್ಪನೆಗೆ ಪೂರಕವಾಗಿ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾಯಿಸಿ ವಿಬ್ ಜಿ ರಾಮ್ ಜಿ ಯೋಜನೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಇದರ ಸತ್ಯಾಸತ್ಯತೆಯನ್ನು ಅರಿಯದೇ, ಜನರ ದಿಕ್ಕಿ ತಪ್ಪಿಸುವ ನಿಟ್ಟಿನಲ್ಲಿ ಪಾದಯಾತ್ರೆ ಮಾಡುತ್ತಿದೆ. ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಸೋತು ಕಂಗಾಲಾಗಿರುವ ಕಾಂಗ್ರೆಸ್ ಹತಾಶ ಮನೋಭಾವದಿಂದ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಎನ್.ಡಿ.ಎ. ಸರ್ಕಾರದ ವಿರುದ್ದ ಸುಳ್ಳು ಅಪಪ್ರಚಾರ ಮಾಡುತ್ತಿದೆ” ಎಂದು ರಾಜ್ಯ ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ಅವರು ಹೇಳಿದರು.

ನರೇಗಾ ಯೋಜನೆಯ ಹೆಸರು ಬದಲಾವಣೆಗೆ ಕಾಂಗ್ರೆಸ್ ಸುಳ್ಯದಿಂದ ಹಮ್ಮಿಕೊಂಡಿರುವ ಸಂಗ್ರಾಮ್ ಪಾದಯಾತ್ರೆಯ ವಿರುದ್ಧ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

“ಮಹಾತ್ಮಾ ಗಾಂಧೀಜಿಯವರ ನಂಬಿಕೆ ಹಾಗೂ ಕನಸುಗಳನ್ನು ಧೂಳೀಪಟ ಮಾಡಿದವರು ಕಾಂಗ್ರೆಸ್ಸಿಗರು. ಕರ್ನಾಟಕದಲ್ಲಿ ಬಾರ್ ಗಳಿಗೆ  ಬೇಕಾಬಿಟ್ಟಿ ಲೈಸನ್ಸ್ ಗಳನ್ನು ನೀಡುವುದರ ಮೂಲಕ ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಲು ಕಾಂಗ್ರೆಸ್ ಹೊರಟಿದೆ. ಇಂತಹವರು ಮಹಾತ್ಮಾ ಗಾಂಧಿಯವರ ಹೆಸರು ಕೈಬಿಟ್ಟ ಬಗ್ಗೆ ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ಹೇಳಿದರು.

“ಸ್ವಚ್ಛಭಾರತ್ ಮಿಷನ್ ಯೋಜನೆಯ ಲೋಗೋವನ್ನು ಗಮನಿಸುವಾಗ ಅರ್ಥವಾಗುತ್ತದೆ. ಪ್ರಧಾನಮಂತ್ರಿಗಳಿಗೆ ಮಹಾತ್ಮಾ ಗಾಂಧಿಯವರ ಮೇಲೆ ಎಷ್ಟು ನಂಬಿಕೆ – ವಿಶ್ವಾಸ ಇದೆ ಎಂಬುದಾಗಿ” ಎಂದ ಪ್ರತಾಪ್ ಸಿಂಹ ನಾಯಕ್ ಅವರು “ಈ ಯೋಜನೆ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಪೂರ್ಣ ಭಾರತಕ್ಕೆ” ಎಂದು ಹೇಳಿದರು.

“ನರೇಗಾ ಯೋಜನೆ ಜಾರಿಗೆ ಬರುವ ಮೊದಲು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜವಹರಲಾಲ್ ರೋಜಗಾರ್ ಯೋಜನೆ ಎಂಬ ಹೆಸರಿತ್ತು. 2009ರಲ್ಲಿ ಮನಮೋಹನ್ ಸಿಂಗ್ ಅವರು ಅದಕ್ಕೆ ಮಹಾತ್ಮಾ ಗಾಂಧಿಯವರ ಹೆಸರನ್ನು ತಂದು ಜವಹರಲಾಲ್ ನೆಹರು ಅವರ ಹೆಸರನ್ನು ತೆಗೆದರು. ಆಗ ಯಾರೂ ವಿರೋಧ ಮಾಡಿಲ್ಲ. ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾದ ಬಳಿಕ ಕಳೆದ ಹತ್ತು ವರ್ಷಗಳ ಅನುಭವದ ಮೇಲೆ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ, ಇದರ ಕುಂದುಕೊರತೆಗಳನ್ನು ತಿಳಿದು ಹೆಸರನ್ನು ಮಾತ್ರ ಬದಲಾವಣೆ ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷಕ್ಕೆ ಹಾಗೂ ಮೋದಿಯವರಿಗೆ ಮಹಾತ್ಮಾ ಗಾಂಧಿಯವರ ಮೇಲೆ ಅಪಾರ ಗೌರವವಿದೆ” ಎಂದು ಹೇಳಿದ ಪ್ರತಾಪ್ ಸಿಂಹ ನಾಯಕ್ ಅವರು “ಮಹಾತ್ಮಾ ಗಾಂಧಿಯವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ತಲುಪುವ ಉದ್ಧೇಶ ಕೇಂದ್ರ ಸರ್ಕಾರದ್ದಾಗಿದೆ. ಆದರೆ ಅದನ್ನು ಸಹಿಸದ ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಾ ಸುಳ್ಳು ಅಪಪ್ರಚಾರ ಮಾಡುತ್ತಿದೆ”  ಎಂದು ಪ್ರತಾಪ್ ಸಿಂಹ ನಾಯಕ್ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿನಯ ಮುಳುಗಾಡು, ಮಂಡಲ ಸಮಿತಿ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಹಿಂದುಳಿದ  ಮೋರ್ಚಾ ಜಿಲ್ಲಾ ಪದಾಧಿಕಾರಿ  ಸೋಮನಾಥ ಪೂಜಾರಿ, ಎಸ್.ಟಿ.ಮೋರ್ಚಾ ಜಿಲ್ಲಾ ಪದಾಧಿಕಾರಿ ಬುದ್ದನಾಯ್ಕ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading