Ad Widget

ಕುಕ್ಕೆ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಸಿದಲ್ಲಿ ದಂಡನೆ ಗ್ಯಾರಂಟಿ ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾಲೂಕು ಮಟ್ಟದ “ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ” ಪೂರ್ವಭಾವಿ ಸಭೆ

ಸುಬ್ರಹ್ಮಣ್ಯ ಆಗಸ್ಟ್ 28 : ಕಡಬ ತಾಲೂಕು ಪಂಚಾಯತ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮತ್ತು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಯೋಗದೊಂದಿಗೆ ಸ್ಥಳೀಯ ಗ್ರಾಮ ಪಂಚಾಯಿತ್ ಗಳ ವ್ಯಾಪ್ತಿಯಲ್ಲಿ “ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ” ಎಂಬ ಧ್ಯೇಯವಾಕ್ಯದೊಂದಿಗೆ ಬೃಹತ್ ಸ್ವಚ್ಛತಾ ಶ್ರಮದಾನದ  ಪೂರ್ವಭಾವಿ ಸಭೆಯು ಗುರುವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕುಮಾರಧಾರ ಸಭಾಂಗಣದಲ್ಲಿ ಜರಗಿತು.
ಸಭೆಯ ಆರಂಭದಲ್ಲಿಯೇ  ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಿರಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ “ಈ ಹಿಂದೆ ಪುತ್ತೂರಿನಲ್ಲಿ 10 ದಿನಗಳ ಕಾಲ ಸ್ವಚ್ಛತಾ ಕಾರ್ಯಕ್ರಮ ನಿರಂತರವಾಗಿ ಕೈಗೊಂಡು ಯಶಸ್ವಿಯಾಗಿರುವುದನ್ನು ಎಲ್ಲರ ಗಮನಕ್ಕೆ ತಂದರು. ಅಲ್ಲದೆ “ಸ್ವಚ್ಛ ಸಂಸ್ಕೃತಿ-ನಮ್ಮ ಸಂಸ್ಕೃತಿ” ಯ ಉದ್ದೇಶವನ್ನು ಸಭೆಗೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ನರೇಗಾ ಯೋಜನೆಯ ಅಂಬುಡ್ಸ್  ಮ್ಯಾನ್ ಶೀನ ಶೆಟ್ಟಿ ಅವರು “ಸ್ವಚ್ಛ ಸಂಸ್ಕೃತಿ-ನಮ್ಮ ಸಂಸ್ಕೃತಿ” ಯ ಧ್ಯೇಯಗಳನ್ನು ಕಾರ್ಯಗತಗೊಳಿಸುವ ಬಗ್ಗೆ ವಿವರವಾದ ಮಾಹಿತಿಗಳನ್ನು ಸಭೆಗೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛತಾ ಅಭಿಯಾನದ ಸಮಾಲೋಚಕರಾದ ನವೀನ್ ರವರು ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನೆಯಾದ “ಸ್ವಚ್ಛ ಸಂಸ್ಕೃತಿ-ನಮ್ಮ ಸಂಸ್ಕೃತಿ” ಯನ್ನು ಅನುಷ್ಠಾನಗೊಳಿಸುವ ಬಗ್ಗೆ ವಿವರಗಳನ್ನು ನೀಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಮಾತನಾಡುತ್ತಾ “ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನೊಂದಿಗೆ ನಾವು ಪ್ಲಾಸ್ಟಿಕ್ ಮುಕ್ತ ಸುಬ್ರಹ್ಮಣ್ಯ ಕ್ಷೇತ್ರವನ್ನು ಮಾಡುವಲ್ಲಿ ಕ್ರಮ ಕೈಗೊಂಡಿದ್ದೇವೆ. ಆ ರೀತಿಯಾಗಿ ಈ ಕೆಳಗಿನಂತೆ ಯೋಜನೆಗಳನ್ನು ಕೂಡ ಹಮ್ಮಿಕೊಂಡಿದ್ದೇವೆ” ಎನ್ನುತ್ತಾ 1) ಕುಕ್ಕೆ ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ದೇವಸ್ಥಾನದ ಹೊರಭಾಗ, ಮುಖ್ಯರಸ್ತೆ, ಪಾರ್ಕಿಂಗ್ ಇತ್ಯಾದಿ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಫಲಕಗಳನ್ನು ಹಾಕಲಾಗಿದೆ.
2) ದೇವಳದ ಒಳಗೆ ನೀಡತಕ್ಕಂತಹ ಲಡ್ಡು ಪ್ರಸಾದ, ಪಂಚಕಜ್ಜಾಯ, ಕಲ್ಲು ಸಕ್ಕರೆ ಸೇರಿದಂತೆ ಒಟ್ಟಾಗಿ ಎಲ್ಲಾ ಪ್ರಸಾದಗಳನ್ನು ಬಟ್ಟೆ ಚೀಲದಲ್ಲಿ ಕೊಡುವ ವ್ಯವಸ್ಥೆ ಮಾಡಲಾಗಿದೆ.
3) ಕುಕ್ಕೆ ಕ್ಷೇತ್ರಕ್ಕೆ ಬರುವ ಭಕ್ತಾದಿಗಳನ್ನು ದೂರದಲ್ಲಿಯೇ ವಾಹನಗಳನ್ನು ತಪಾಸಣೆ ಮಾಡುವ ಸಲುವಾಗಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸುವುದೆಂದು ನಿರ್ಧರಿಸಲಾಗಿದೆ.
4) ಕ್ಷೇತ್ರದಲ್ಲಿ ಇರುವ ಎಲ್ಲಾ ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕರಪತ್ರಗಳನ್ನು ವಿತರಿಸಲಾಗುವುದು.
5) ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಆಗಾಗ ಮೈಕ್ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
6) ಕುಕ್ಕೆ ಕ್ಷೇತ್ರದ ಆಸುಪಾಸಿನಲ್ಲಿ ಯಾವುದೇ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಕಸ ಕಡ್ಡಿಗಳು ಇಲ್ಲದಂತೆ ಸ್ವಚ್ಛಗೊಳಿಸಲಾಗುವುದು.
7) ಶ್ರೀದೇವಳದ ಹೊರಾಂಗಣ ಪ್ರವೇಶದಿಂದಲೇ ಯಾವುದೇ ಪ್ಲಾಸ್ಟಿಕ್ ಬಾಟಲ್ ಗಳು, ಚೀಲ ಇನ್ನಿತರ ವಸ್ತುಗಳನ್ನು ಒಯ್ಯದಂತೆ ಕಟ್ಟುನಿಟ್ಟಿನ ಪಾಲನೆ ಮಾಡಲಾಗಿದೆ.
8) ದೇವಳದ ಒಳಾಂಗಣ, ಹೊರಾಂಗಣ ಹಾಗೂ ಸುತ್ತುಮುತ್ತಲು ಹೆಚ್ಚು ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾಗಿದೆ.
9) ದೇವಳದ ಹೊರ ಭಾಗದಲ್ಲಿ ಮುಖ್ಯರಸ್ತೆ, ಪಾರ್ಕಿಂಗ್ ಗಳಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ವೇಸ್ಟ್ ಹಾಕಲು ಟಬ್ ಗಳನ್ನ ಅಳವಡಿಸಲಾಗುವುದು.
10) ಈ ಮೇಲಿನ ಎಲ್ಲ ಪಾಲನೆಗಳನ್ನು ಮಾಡದೆ ಇದ್ದಲ್ಲಿ ನಿರ್ದಾಕ್ಷಣವಾಗಿ ದಂಡನೆ ವಿಧಿಸಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಡಬ ತಾಲೂಕು ಕೆ.ಡಿ.ಪಿ ಸದಸ್ಯ ಶಿವರಾಮ ರೈ, ಡಾಕ್ಟರ್ ಶಿವಕುಮಾರ್ ಹೊಸಳಿಕೆ, ಅಶೋಕ್ ಕುಮಾರ್ ಮೂಲೆ, ಡಾ.ರವಿ ಕಕ್ಕೆಪದವು,   ಚಂದ್ರಶೇಖರ ನಾಯರ್, ಉಪವಲಯ ಅರಣ್ಯಾಧಿಕಾರಿ ಅಪೂರ್ವ, ಪವನ್ ಕುಮಾರ್, ವಿಮಲಾ ರಂಗಯ್ಯ, ಗೋಪಾಲ ಎಣ್ಣೆಮಜಲು ಮುಂತಾದವರು ಮಾತನಾಡಿ “ಕಳೆದ ಹಲವಾರು ವರ್ಷಗಳಿಂದ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಾ ಬಂದಿದೆ ಇನ್ನು ಅದು ಬೇಡ. ಕಾರ್ಯಗತ ಮಾಡಲೇಬೇಕಾಗಿದೆ” ಎಂದು ಅಗ್ರಹಿಸಿದರು.
ವೇದಿಕೆಯಲ್ಲಿ ಇದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಗ್ರಾಮ ಪಂಚಾಯತ್, ಉಪಾಧ್ಯಕ್ಷ ರಾಜೇಶ್ ಎನ್.ಎಸ್ ಮುಂತಾದವರು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಂಪೂರ್ಣ ಒಪ್ಪಿಗೆಯನ್ನು ಸೂಚಿಸಿದರು.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಸ್ವಾಗತಿಸಿದರು.
ಕಾರ್ಯದರ್ಶಿ ಮೋನಪ್ಪ.ಡಿ ವಂದಿಸಿದರು.
ಕಡಬ ತಾಲೂಕು ಪಂಚಾಯತ್ ಎನ್.ಆರ್.ಎಲ್.ಎಂ ಪ್ರೊಗ್ರಾಮ್ ಮ್ಯಾನೇಜರ್ ಜಗತ್ ಹಾಗೂ ಕಡಬ ತಾಲೂಕು ಪಂಚಾಯತ್ ನರೇಗಾ ಯೋಜನೆಯ ಐ.ಇ.ಸಿ ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಸಂಜೀವಿನಿ ಒಕ್ಕೂಟದವರು ತಯಾರಿಸಲಾದ ಬಟ್ಟೆ ಚೀಲಗಳನ್ನು  ಪ್ರದರ್ಶಿಸಲಾಯಿತು.
ತದನಂತರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ  ನಿರ್ಮಿಸಲಾಗಿರುವ ಕಬ್ಬಿಣದ ಬಾಟಲ್ ಬೂತ್ ಗಳನ್ನು ಅನಾವರಣಗೊಳಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading