Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರೋತ್ಸವ ಕ್ಷೇತ್ರದ ವಿಶೇಷತೆಗಳು

ಸುಬ್ರಹ್ಮಣ್ಯ : ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನ.16 ರಿಂದ ಆರಂಭವಾಗಿ ಡಿಸೆಂಬರ್ 02ರ ತನಕ ನಡೆಯಲಿರುವುದು. ನ.26 ಬುಧವಾರದಂದು ಪ್ರಾತಃಕಾಲ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರು ಚಂಪಾಷಷ್ಠಿ ಮಹಾ ರಥೋತ್ಸವದಲ್ಲಿ ಬ್ರಹ್ಮರಥ ಏರಿ ನೆರೆದ ಲಕ್ಷಾಂತರ ಭಕ್ತರನ್ನು ಹರಸುವರು.

ಕ್ಷೇತ್ರದ ವಿಶೇಷತೆಗಳು1) ಮೂಲ ಮೃತ್ತಿಕೆ ಪ್ರಸಾದ : ವರ್ಷಕ್ಕೊಮ್ಮೆ ಬರುವ ಕಾರ್ತಿಕ ಬಹುಳ ಏಕಾದಶಿ ದಿನದಂದು  ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರು ಗರ್ಭಗುಡಿ ಒಳ ಹೋಕ್ಕು  ದೇವರನ್ನು ಪ್ರಾರ್ಥಿಸಿ, ಮೂಲ ಮೃತ್ತಿಕೆ ತೆಗೆಯುತ್ತಾರೆ. ಅದನ್ನು ಆ ದಿನ ನೆರೆದವರಿಗೆ ನೀಡುವುದಲ್ಲದೆ, ವರ್ಷವಿಡಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಮೂಲಪ್ರಸಾದವಾಗಿ ನೀಡಲಾಗುವುದು.
2) ಸರ್ಪ ಸಂಸ್ಕಾರ ಸೇವೆ : ಸರ್ಪದೋಷಗಳ ನಿವಾರಣೆಗಾಗಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಸೇವಾದಿಗಳಿಗೆ ಜಾತಿ ಮತ ಭೇದವಿಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸೇವಾ ಕೈಕರ್ಯದೊಂದಿಗೆ ಕೃತಾರ್ಥವಾಗಿ ಹಿಂದಿರುಗುತ್ತಾರೆ. ವಿವಾಹ ಭಾಗ್ಯ, ಚರ್ಮರೋಗ,ಸಂತಾನ ಪ್ರಾಪ್ತಿ ಹಾಗೂ ಅವಿಷ್ಟ ಸಿದ್ಧಿಗಾಗಿ ಸುಬ್ರಹ್ಮಣ್ಯನ ಮೊರೆಹೊಕ್ಕು ಸೇವೆ ಸಲ್ಲಿಸಿ ಸಫಲತೆ ಕಂಡವರು ಕ್ಷೇತ್ರದ ಪವಾಡಕ್ಕೆ ಬೆರಗಾಗುತ್ತಾರೆ.
3) ಬೀದಿ ಉರುಳು ಸೇವೆ : ಜೀವನದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಅಥವಾ ತೀವ್ರವಾದ ಕಾಯಿಲೆಯಿಂದ ಬಳಲುತ್ತಿರುವ ಸಮಯದಲ್ಲಿ ಇದರ ನಿವಾರಣೆಗೋಸ್ಕರ ಬೀದಿ ಉರುಳು ಸೇವೆ ಎಂಬ ಕಠಿಣ ಹರಿಕೆಯನ್ನು ಭಕ್ತರು ಹೊತ್ತುಕೊಳ್ಳುತ್ತಾರೆ. ಕುಮಾರಧಾರ ನದಿಯ ತಟದಿಂದ ಸುಮಾರು ಎರಡು ಕಿಲೋಮೀಟರ್ ದೂರದ ವರೆಗೆ ರಥಬೀದಿಯಲ್ಲಿ ಕ್ರಮಿಸಿ ದೇವಳದ ಅಂಗಣ ಪ್ರವೇಶಿಸಿ ಪ್ರದಕ್ಷಿಣೆ ಬಂದು ದರ್ಪಣ ತೀರ್ಥ ನದಿಯಲ್ಲಿ ಮಿಂದು ಕೃತಾರ್ಥರಾಗುತ್ತಾರೆ. ಈ ಕಠಿಣ ಸೇವೆಯನ್ನು ಜಾತಿ ಮತ ಭೇದವಿಲ್ಲದೆ ಮಕ್ಕಳು, ಮಹಿಳೆಯರು, ಪುರುಷರು ಎಂಬ ಭೇದ ಭಾವವಿಲ್ಲದೆ ಎಲ್ಲರೂ ನಡೆಸುವುದನ್ನು ನಾವು ಕಾಣಬಹುದು ಇದು ಶುಲ್ಕ ರಹಿತ  ಸೇವೆಯು ಹೌದು.
4) ಪ್ರಾರ್ಥನೆ : ಸರ್ಪ ಹತ್ಯಾದೋಷ, ಕಾಳಸರ್ಪ ದೋಷ, ಮದುವೆ ಆಗದಿರುವುದು, ಸಂತಾನಹೀನತೆ, ಚರ್ಮವ್ಯಾದಿ, ಭೂಮಿ ನೀರು, ಭೂಮಿ ವ್ಯಾಪಾರ, ಆರೋಗ್ಯ ಮುಂತಾದ ಸಂಬಂಧವಾಗಿ ಬರುವಂತಹ ಜ್ವಲಂತ ಸಮಸ್ಯೆಗಳ ಪರಿಹಾರೋಪಾಯಕ್ಕಾಗಿ ಹಾಗೂ ತಮ್ಮ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನು ನೆರವೇರಿಸಬಹುದು. ಮಧ್ಯಾಹ್ನ ಮಹಾಪೂಜೆಯ ನಂತರ ಹಾಗೂ ರಾತ್ರಿ ಮಹಾಪೂಜೆ ನಂತರ ಶ್ರೀ ದೇವರ ಮುಂಭಾಗದಲ್ಲಿ ಪ್ರಾರ್ಥನೆಯನ್ನು ನಡೆಸಲಾಗುವುದು. ಮಧ್ಯಾಹ್ನ ಗಂಟೆ 12 ಹಾಗೂ ರಾತ್ರಿ ಗಂಟೆ 7ರ ಮೊದಲು ನಿಗದಿತ ಶುಲ್ಕ ಪಾವತಿಸಿ ರಶೀದಿ ಪಡೆದುಕೊಳ್ಳಬಹುದು.
5) ಎಡೆಸ್ನಾನ : ಶ್ರೀ ಕ್ಷೇತ್ರವು ಅನ್ನದಾನಕ್ಕೆ ವಿಶೇಷವಾಗಿ ಪ್ರಸಿದ್ಧವಾಗಿದ್ದು ಅನ್ನದಾನ ಸುಬ್ಬಪ್ಪನೆಂದು ದೇವರ ಸ್ತುತಿ ಪದ್ಯಗಳಲ್ಲಿ ವರ್ಣಿಸಲಾಗಿದೆ. ಇಲ್ಲಿ ಪ್ರತಿದಿನ ಏಕಾದಶಿ ಹೊರತುಪಡಿಸಿ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಇದೆ. ಇತ್ತೀಚೆಗೆ ಬೆಳಗ್ಗೆ ಉಪಹಾರ ಆರಂಭವಾಗಿರುತ್ತದೆ. ವಾರ್ಷಿಕ ಜಾತ್ರಾ ಸಂದರ್ಭ ಇಲ್ಲಿಯ ಹೊರಾಂಗಣದಲ್ಲಿ ದೇವರ ನೈವೇದ್ಯ ಆದಮೇಲೆ ಅದನ್ನ ಎಲೆಯಲ್ಲಿ ಬಡಿಸಿ ಗೋವುಗಳಿಂದ ಉಣಿಸಿ ಅದರ ಮೇಲೆ ಮಾಡುವ ಸೇವೆಯೇ ಎಡೆ ಸ್ನಾನ ಸೇವೆಯಾಗಿದೆ. ಈ ಸೇವೆಯನ್ನು ಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಮಾಡುತ್ತಾರೆ.
ನೌಕ ವಿಹಾರ ಮತ್ತು ಅವಭೃಥೋತ್ಸವ : ಪಾವನ ತೀರ್ಥ ಕುಮಾರಧಾರ ನದಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ಚಂಪಾಷಷ್ಠಿಯ ಮರುದಿನ ನಡೆಯುತ್ತದೆ. ಬೆಳಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ನಡೆದು ನಂತರ ಓಕುಳಿ ಚೆಲ್ಲಾಟ ದೇವರಿಗೆ ಓಕುಳಿ ಸಮರ್ಪಣೆ ತದನಂತರ ಭಕ್ತಾದಿಗಳಿಗೆ ಓಕುಳಿ ಪ್ರಕ್ಷಣೆ ನಡೆದು ನಂತರ ದೇವಳದಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಕುಮಾರಧಾರ ನದಿಯಲ್ಲಿ ಮಾವು, ಬಾಳೆಗಳನ್ನೊಳಗೊಂಡ ತಳಿರು-ತೋರಣ ಮತ್ತು ಹೂಗಳಿಂದ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ಶ್ರೀ ಸ್ವಾಮಿಯ ನೌಕಾವಿಹಾರ ನಡೆಯುತ್ತದೆ. ತದನಂತರ ವೇದ ಮಂತ್ರ ಘೋಷದೊಂದಿಗೆ ಕ್ಷೇತ್ರದ ಅವಭೃಥೋತ್ಸವ ಸಂಪನ್ನವಾಗುತ್ತದೆ. ಅವಭೃಥೋತ್ಸವದ ಬಳಿಕ ಕುಮಾರಧಾರ ನದಿ ತೀರದ ಕಟ್ಟೆಯಲ್ಲಿ ಪೂಜೆ ನೆರವೇರುತ್ತದೆ. ಅದು ಮುಗಿದ ರಥ ಬೀದಿಯಲ್ಲಿ ಹಿಂತಿರುಗಿ ಬರುವ ಸಂದರ್ಭದಲ್ಲಿ ವ್ಯಾಪಾರಸ್ಥರು ಭಕ್ತಾದಿಗಳು ಪೂಜೆ ಸಲ್ಲಿಸುತ್ತಾರೆ. ಬಳಿಕ ದೇವಳದ ದ್ವಾದಶಿ ಮಂಟಪದಲ್ಲಿ ಪೂಜೆ ಹಾಗೂ ಒಳಾಂಗಣದಲ್ಲಿ ಸಮಾಪನ ಪೂಜೆ ನೆರವೇರುತ್ತದೆ.
6) ಮತ್ಸ್ಯತೀರ್ಥ ಪ್ರದೇಶ: ದೀಪಾವಳಿ ಹಬ್ಬ ಮುಗಿದ ಕೂಡಲೇ ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಅತಿ ಉದ್ದದ ಸುಂದರ ಮೀನುಗಳು ಹೊಲಸು ಬರುತ್ತವೆ ಸ್ನಾನ ಘಟ್ಟದಲ್ಲಿರುವ ಮತ್ಸ್ಯ ತೀರ್ಥ ಪ್ರದೇಶದಲ್ಲಿ ಮಾತ್ರ ಈ ಮೀನುಗಳು ಕಾಣಲು ಸಿಗುತ್ತವೆ. ಚಂಪಾಶಕ್ತಿ ಮಹೋತ್ಸವದ ಮರುದಿನ ಸುಬ್ರಹ್ಮಣ್ಯ ದೇವರಿಗೆ ಈ ಸ್ಥಳದಲ್ಲಿ ಅವಭೃಥೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ಈ ಮೀನುಗಳನ್ನು ಕಾಣಬಹುದು. ಈ ಮೀನುಗಳನ್ನು ದೇವರ ಮೀನುಗಳಾದ್ದರಿಂದ ಭಕ್ತರು ಮೀನುಗಳಿಗೆ ಕಡ್ಲೆ ಪುರಿ ಅಕ್ಕಿ ಹಾಕುತ್ತಾರೆ. ಹಾಗೆ ಶ್ರೀ ದೇವಳದಿಂದ ಅನ್ನಪ್ರಸಾದ ಕೂಡ ನೀಡಲಾಗುತ್ತದೆ. ಮರುದಿನ ಶ್ರೀ ಕ್ಷೇತ್ರದ ದೈವ ಕೂಡ ಬಂದು ಮೀನುಗಳಿಗೆ ಆಹಾರ ಹಾಕುವುದು ಇಲ್ಲಿ ಸಂಪ್ರದಾಯ. ಇಲ್ಲಿ ಮೀನುಗಾರಿಕೆ ನಿಷಿದ್ಧವಾಗಿದೆ. ನಂತರ ದೇವರ ಮೀನುಗಳು ಅಲ್ಲಿಂದ ಹೊರಟು ಹೋಗುತ್ತವೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading