
ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃಸಂಘದ ಸರ್ವಸದಸ್ಯರ ಮಹಾಧಿವೇಶನ ಜೂನ್ 1 ರಂದು ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.
ಈ ಬಗ್ಗೆ ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಾತೃಸಂಘದ ಅಧ್ಯಕ್ಷ ಲೋಕಯ್ಯ ಗೌಡ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ವಿವರ ನೀಡಿದರು.
ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃಸಂಘವು ಜಿಲ್ಲೆಯ ಎಲ್ಲ ತಾಲೂಕುಗಳ ಗೌಡ ಸಂಘಗಳ ಸಹಭಾಗಿತ್ವದಲ್ಲಿ 2024 ಆಗಸ್ಟ್ 30 ರಂದು ನೋಂದಾವಣೆಗೊಂಡು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. 2018 ರಲ್ಲಿ ದ.ಕ.ಜಿಲ್ಲಾ ಮಟ್ಟದಲ್ಲಿ ಸಂಘವು ರಚನೆಯಾಗಿ ತದನಂತರ ಸುದೀರ್ಘ ಸಭೆ – ಬೈಲಾರಚನೆಗೊಂಡರೂ, ಕೊರೋನಾದಂತಹ ರೋಗದ ತೊಂದರೆಗಳಿಂದಾಗಿ ಸಂಘವು ಪ್ರಾರಂಭದಲ್ಲಿ ಹೆಚ್ಚು ವೇಗವನ್ನು ಪಡೆಯುವಲ್ಲಿ ವಿಳಂಬವಾಯಿತು.
ಇದೀಗ ನೋಂದಾವಣೆಗೊಂಡು ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯ ಹಾಗೂ ಗೌರವ ಸಲಹೆಗಾರರ ತಂಡ ಸೇರಿ ನಮ್ಮ ಸಂಘಕ್ಕೆ 102 ಜನ ಪದಾಧಿಕಾರಿಗಳ ತಂಡ ಇದೆ.
ನಮ್ಮ ಜಿಲ್ಲಾ ಮಾತೃ ಸಂಘವು ತನ್ನ ಉದ್ದೇಶದಲ್ಲಿ ತಿಳಿಸಿದಂತೆ ಸಮಾಜದ ಸಂಸ್ಕೃತಿ, ಆಚಾರ-ವಿಚಾರಗಳ ಅಡಿಪಾಯದಲ್ಲಿದ್ದು, ಇದನ್ನು ಒಪ್ಪಿಕೊಂಡು ಬರುವ ಪ್ರತಿಯೊಬ್ಬರಿಗೂ ಸದಸ್ಯತನ ನೀಡಲಾಗುತ್ತದೆ. ಸಂಘದಲ್ಲಿ ಆಜೀವ ಸದಸ್ಯತನ, ಮಹಾಪೋಷಕ ಹಾಗೂ ಪೋಷಕ ಸದಸ್ಯತ್ವಗಳ ಮೂರು ಹಂತದ ಸದಸ್ಯತನ ಹೊಂದಿದ್ದು, ಈಗಾಗಲೇ 1300 ಜನ ಸದಸ್ಯರಾಗಿದ್ದಾರೆ. ಮಹಾಅಧಿವೇಶನದ ಹೊತ್ತಿಗೆ ಸದಸ್ಯರ ಸಂಖ್ಯೆ 2000 ಏರಬಹುದು ಎಂದು ದಿನೇಶ್ ಮಡಪ್ಪಾಡಿ ಹೇಳಿದರು.
ಮಂಗಳೂರಿನ ಚಿಲಿಂಬಿಯಲ್ಲಿರುವ ಮಂಗಳೂರು ಒಕ್ಕಲಿಗ
ಗೌಡಸಮಾಜದ ಕಾಂಪ್ಲೆಕ್ಸ್ ನಲ್ಲಿ ನಮ್ಮ ಜಿಲ್ಲಾ ಮಾತೃ ಸಂಘದ ಕಛೇರಿಯನ್ನು ತೆರೆದಿದ್ದು, ಸದಸ್ಯರ ನೋಂದಣಿ, ಮಾಹಿತಿ ವಿವರ, ಸಮಾಜ ಬಾಂಧವರ ಸಮೀಕ್ಷೆ ಮುಂತಾದ ಕೆಲಕಾರಗಳನ್ನು ಪ್ರಾರಂಭಿಸಿರುತ್ತೇವೆ. ಇದೀಗ ಸಂಘ ನೋಂದಾವಣೆ ಆಗಿ ಒಂದು ವರ್ಷ ಆಗುವ ಸಂದರ್ಭದಲ್ಲಿ ಎಲ್ಲಾ ಸದಸ್ಯರನ್ನು ಒಂದೇ ಸೂರಿನಡಿ ಸೇರಿಸಬೇಕೆಂಬ ಉದ್ದೇಶದಿಂದ ಜೂನ್ 1, 2025 ಆದಿತ್ಯವಾರದಂದು ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸರ್ವಸದಸ್ಯರ ಮಹಾಧಿವೇಶನವನ್ನು ಹಮ್ಮಿಕೊಳ್ಳಲಾಗಿದೆ. ಅಧಿವೇಶನದಲ್ಲಿ ಜಿಲ್ಲಾ ಸಂಘವೂ ಮುಂದೆ ತೆಗೆದುಕೊಳ್ಳಬೇಕಾದ ಕೆಲಸಕಾರ್ಯಗಳು ಮತ್ತು ಯೋಜನೆಗಳ ಬಗ್ಗೆ ವಿಚಾರ ಮಂಡನೆ ನಡೆಯಲಿದೆ. ಅಲ್ಲದೇ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಗುತ್ತದೆ. ಅಧಿವೇಶನವನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ|ರೇಣುಕಾಪ್ರಸಾದ್ ಕೆ.ವಿ. ಯವರು ಉದ್ಘಾಟನೆ ಮಾಡಲಿದ್ದಾರೆ. ದ.ಕ.ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕು ಒಕ್ಕಲಿಗರ ಯಾನೆ ಗೌಡ ಸಂಘದ ಅಧ್ಯಕ್ಷರುಗಳು ಗೌರವ ಉಪಸ್ಥಿತರಿರುತ್ತಾರೆ. ಜಿಲ್ಲಾ ಮಾತೃ ಸಂಘದ ಅಧ್ಯಕ್ಷರಾದ ಲೋಕಯ್ಯ ಗೌಡ ಕೆ. ಯವರ ಅಧ್ಯಕ್ಷತೆಯಲ್ಲಿ ಈ ಅಧಿವೇಶನವನ್ನು ನಡೆಸಲಾಗುತ್ತದೆ. ಮಹಾಧಿವೇಶನದಲ್ಲಿ ಎಲ್ಲಾ ಪದಾಧಿಕಾರಿಗಳು, ಆಸಕ್ತ ಸಮಾಜ ಬಾಂಧವರುಗಳು ಭಾಗವಹಿಸಲಿದ್ದು, ಜಿಲ್ಲಾಮಟ್ಟದಲ್ಲಿ ಸಮಾಜದ ಸಂಘಟನೆ ಬೆಳೆಯಲು ಸಹಕಾರ ನೀಡಲಿರುವರು.
ಜಿಲ್ಲಾ ಸಂಘದ ಉಪಾಧ್ಯಕ್ಷರುಗಳಾಗಿ, ನಿತ್ಯಾನಂದ ಮುಂಡೋಡಿ ಸುಳ್ಯ, ರಾಮದಾಸ ಗೌಡ ಪುತ್ತೂರು, ಪೂವಾಜೆ ಕುಶಾಲಪ್ಪ ಗೌಡ ಬೆಳ್ತಂಗಡಿ, ಲಿಂಗಪ್ಪ ಗೌಡ ಕೆ.-ಬಂಟ್ವಾಳ, ತಿಮ್ಮಪ್ಪ ಗೌಡ ಕುಂಡಡ್ಕ ಕಡಬ ರವರುಗಳು ಇದ್ದು, ಸಂಘದ ಪ್ರಧಾನಕಾರ್ಯದರ್ಶಿಯಾಗಿ ದಿನೇಶ್ ಮಡಪ್ಪಾಡಿ, ಕೋಶಾಧಿಕಾರಿಯಾಗಿ ಹೆಚ್. ಪದ್ಮಗೌಡ ಬೆಳಾಲು, ಕಾರ್ಯದರ್ಶಿಗಳಾಗಿ ರಾಮಣ್ಣ ಗೌಡ ಕೊಂಡೆಬಾಯಿ ಮತ್ತು ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಸಂಘವನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ವಿವರ ನೀಡಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಮಡಪ್ಪಾಡಿ ಹಾಗೂ ಲೋಕಯ್ಯ ಗೌಡರು, ” ಜಿಲ್ಲಾ ಮಟ್ಟದಲ್ಲಿ ಒಂದೇ ಗೌಡಸಂಘ ಇರಬೇಕೆಂಬ ದೃಷ್ಟಿಯಿಂದ ಎರಡು ಸಂಘಗಳನ್ನು ಒಂದುಗೂಡಿಸಲು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಪ್ರಯತ್ನಿಸಿದ್ದು ಹೌದು. ಆದರೆ ನಮ್ಮದು ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಸಮುದಾಯದ ಜಿಲ್ಲಾ ಮಾತೃಸಂಘ. ಬೇರೆ ಜಾತಿ ಸಂಸ್ಕೃತಿಯವರನ್ನು ಸೇರಿಸಿಕೊಳ್ಳುವುದಕ್ಕೆ ಸ್ಥಳೀಯ ಗೌಡ ಸಮುದಾಯದವತ ವಿರೋಧವಿದೆ. ಆದುದರಿಂದ ನಾವು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ಗೌಡ ಸಂಘಗಳ ಒಗ್ಗೂಡುವಿಕೆಯ ಜಿಲ್ಲಾ ಮಾತೃಸಂಘವನ್ನು ಬಲಿಷ್ಠವಾಗಿ ಕಟ್ಟುತ್ತಿದ್ದೇವೆ. ಈ ಸಂಘದ ಮೂಲಕ ಸ್ವಜಾತಿ ಬಾಂಧವರ ಜನಸಂಖ್ಯಾ ಸಮೀಕ್ಷೆ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ, ಅಗತ್ಯವಿರುವವರಿಗೆ ಶೈಕ್ಷಣಿಕವಾಗಿ, ಆರೋಗ್ಯಕ್ಕೆ ಸಂಬಂಧಿಸಿ ಹಾಗೂ ಇತರ ರೀತಿಯ ನೆರವು ಕೊಡಬೇಕು ಎಂಬ ಉದ್ದೇಶವಿದೆ ” ಎಂದು ತಿಳಿಸಿದರು.