
ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ಸುಳ್ಯದಲ್ಲಿ ಪ್ರಥಮ ಬಾರಿಗೆ ಮೇ.9 ರಿಂದ 12 ತನಕ ಫುಡ್ ಫೆಸ್ಟ್ ನಡೆಯಲಿದ್ದು, ಕರಪತ್ರ ಬಿಡುಗಡೆ ಕಾರ್ಯಕ್ರಮ ಎ.26 ರಂದು ಅಂಬಟೆಡ್ಕದಲ್ಲಿರುವ ಶ್ರೀ ವೆಂಕಟರಮಣ ದೇವ ಮಂದಿರದಲ್ಲಿ ನಡೆಯಿತು.
ಯುವ ಉದ್ಯಮಿ ಸೃಷ್ಟಿ ಮೊಬೈಲ್ಸ್ ಮಾಲಕ ಶೈಲೇಂದ್ರ ಸರಳಾಯ ರವರು ಕರ ಪತ್ರ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪೊಪ್ಯುಲರ್ ಸ್ವೀಟ್ಸ್ ನ ಅನೂಪ್ ಪೈ ಮಾತನಾಡಿ ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ರೀತಿಯ ಆಹಾರ ಮೇಳವನ್ನು ಆಯೋಜಿಸಲಾಗಿದೆ. ದ.ಕ ಮತ್ತು ಉಡುಪಿ,ಕುಂದಾಪುರ ಮತ್ತು ಕಾಸರಗೋಡಿನ ಆಹಾರ ಖಾದ್ಯಗಳ ಸ್ಟಾಲ್ ಗಳು ಇರುವುದಲ್ಲದೆ ಜನರ ಅಭಿರುಚಿಗೆ ತಕ್ಕಂತೆ ಶುದ್ಧ ಸಸ್ಯಹಾರಿ ಮತ್ತು ಮಾಂಸಾಹಾರಿ ವಿವಿಧ ಬಗೆಯ ಆಹಾರ ಖಾದ್ಯಗಳು ಆಹಾರ ಮೇಳದಲ್ಲಿ ಲಭ್ಯವಿರುತ್ತದೆ. ಸಸ್ಯಹಾರಿ ಮತ್ತು ಮಾಂಸಾಹಾರಿ ಕೌಂಟರ್ ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ನಾಲ್ಕು ದಿನಗಳ ಕಾಲ ಸಂಜೆ 4.00 ಗಂಟೆಯಿಂದ ಸ್ಟಾಲ್ ಗಳು ತೆರೆಯಲ್ಪಡುತ್ತದೆ. ವಿಶೇಷ ಆಕರ್ಷಣೆಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಫುಡ್ ಫೆಸ್ಟ್ ಮುಂದೆ ಪ್ರತಿ ವರ್ಷ ನಡೆಸಿಕೊಂಡು ಹೋಗುವ ಆಲೋಚನೆ ಇದೆ. ವಿವಿಧ ಪ್ರದೇಶದ ವಿವಿಧ ಬಗೆಯ ಆಹಾರ ಖಾದ್ಯಗಳನ್ನು ಸವಿಯುವ ಅವಕಾಶ ಸುಳ್ಯದ ಜನತೆಗೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಥಮ ಪ್ರಯೋಗ ಇದಾಗಿದೆ. ವಿಶೇಷವಾಗಿ ಪೆಟ್ ಶೋ,ಡಾನ್ಸ್, ಮ್ಯೂಸಿಕಲ್ ನೈಟ್,ಮೈಮ್ ಶೋ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉಚಿತ ಪ್ರವೇಶವಿದ್ದು ಸುಳ್ಯದ ಜನತೆ ಕೈ ಜೋಡಿಸಬೇಕು ಎಂದು ಗುರುದತ್ ನಾಯಕ್ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ರೀನ್ ಹೀರೋ ಆಪ್ ಇಂಡಿಯಾ ಖ್ಯಾತಿಯ ಡಾ. ರಾಧಾಕೃಷ್ಣ ನಾಯರ್ ಹಾಗೂ ಭಟ್ & ಭಟ್ಸ್ ನ ಸುದರ್ಶನ್ ಭಟ್ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಉದ್ಯಮಿ ಜಿ.ಜಿ.ನಾಯಕ್, ನವನೀತ್ ಎಂಟರ್ ಪ್ರೈಸಸ್ ಮಾಲಕ ಕೇಶವ ನಾಯಕ್ ಸುಳ್ಯ, ಇಂಜಿನಿಯರ್ ಸೂರಜ್ ಕೊಡಿಯಾಲಬೈಲು, ಶರತ್ ಪರಿವಾರಕಾನ, ಸತೀಶ್ ಅರಂಬೂರು ಮತ್ತಿತರರು ಉಪಸ್ಥಿತರಿದ್ದರು.