
ದ್ವಿತೀಯ ಪಿಯುಸಿ ಫಲಿತಾಂಶ ಇನ್ನು ಕೆಲವೇ ನಿಮಿಷಗಳಲ್ಲಿ ವೆಬ್ಸೈಟ್ ಗಳಲ್ಲಿ ಪ್ರಕಟವಾಗಲಿದೆ. ಈ ನಡುವೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಎಂದಿನಂತೆ ಉಡುಪಿ ಜಿಲ್ಲೆ ಪ್ರಥಮಸ್ಥಾನ ಪಡೆದಿದ್ದು, ದ.ಕ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಈ ಬಾರಿಯೂ ಸಹ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
ಕಲಾ ವಿಭಾಗದಲ್ಲಿ ಸಂಜನಾ ಬಾಯಿ, ವಾಣಿಜ್ಯ ವಿಭಾಗದಲ್ಲಿ ದೀಪಾಶ್ರೀ, ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್, ದೀಕ್ಷಾ ಆರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಬಾರಿ 73.4% ಮಕ್ಕಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 57%, ಅನುದಾನಿತ ಕಾಲೇಜುಗಳಲ್ಲಿ 60%, ಅನುದಾನ ರಹಿತ ಕಾಲೇಜುಗಳಲ್ಲಿ 90%, ವಸತಿ ಶಾಲೆಗಳಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದೆ ಎಂದು ಶಿಕ್ಷಣ ಸಚಿವರು ತಿಳಿಸಿದರು.
ಪಿಯುಸಿ ಪರೀಕ್ಷೆಯ ದ್ವಿತೀಯ ಮತ್ತು ತೃತೀಯ ಪರೀಕ್ಷೆಗಳನ್ನು ಈ ಬಾರಿ ಕಳೆದ ಬಾರಿಗಿಂತ ಬೇಗನೆ ಮಾಡುತ್ತಿದ್ದೇವೆ. ನಾವು ಅನುತ್ತೀರ್ಣರಾದ ಮಕ್ಕಳನ್ನು ಕಡೆಗಣಿಸುವುದಿಲ್ಲ. ಅವರ ಭವಿಷ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಕಳೆದ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಿಸಿಟಿವಿ ಕೆಮೆರಾ ಅಳವಡಿಸಲಾಗಿತ್ತು. ಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವ ಸಲುವಾಗಿ ಈ ಬಾರಿ ದ್ವಿತೀಯ ಪರೀಕ್ಷೆಯಲ್ಲೂ ಸಹ ಸಿಸಿಟಿವಿ ಅಳವಡಿಸಲಾಗಿತ್ತು.