
“ಸುಂದರ ಪರಿಸರದ ಸ್ನೇಹಾಲಯ ನನ್ನ ಬಾಲ್ಯದ ನೆನಪುಗಳನ್ನು ಮರುಕಳಿಸಿತು. ಶಾಲೆಗಳು ಇಂದು ವ್ಯಾಪಾರೀಕರಣ ಆಗುವ ಕಾಲಘಟ್ಟದಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಕ್ಷಣದ ಪಾವಿತ್ರ್ಯತೆ ಕಾಪಾಡಿಕೊಂಡು , ಸಂಸ್ಕಾರ ನೀಡುವ ಶಾಲೆ ಸ್ನೇಹ ಶಾಲೆ.
ಶಾಲೆ ಎಂದರೆ ಸ್ನೇಹದಂತಿರಬೇಕು. ಸಂಸ್ಕಾರದೊಂದಿಗೆ ಕಲಿತಾಗ ಸತ್ಪ್ರಜೆಯಾಗಲು ಸಾಧ್ಯ .ಇಂದಿನ ಕಲುಷಿತ ವಾತಾವರಣದಲ್ಲಿ ಸಂಸ್ಕಾರಯುತ ಸ್ನೇಹ ಶಾಲೆಯಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ನೀಡುವ ದೇಶಸೇವೆ ಮಾಡುತ್ತಿರುವ ದಾಮ್ಲೆ ದಂಪತಿಗಳ ಶ್ರಮ ಶ್ಲಾಘನೀಯ. ಶಾಲೆಗಳಲ್ಲಿ ಪುಸ್ತಕದ ಕಲಿಕೆಗೆ ಸೀಮಿತರಾಗದೆ ಬದುಕಿನ ಶಿಕ್ಷಣ ನೀಡಿದಾಗ ಮಗು ಯಶಸ್ಸಿನ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ. ನೀರಿನ ಸೆಳೆತದ ವಿರುದ್ಧ ಈಜುವ ಈ ಶಾಲೆ ಇನ್ನಷ್ಟು ಬೆಳಗಲಿ. ರೋಗಕ್ಕೆ ಕಾರಣವಾದ ನಮ್ಮ ಜೀವನ ಶೈಲಿ ಹಾಗೂ ಆಹಾರ ಕ್ರಮಗಳನ್ನು ಬದಲಾಯಿಸಿಕೊಂಡು ರೋಗ ರಹಿತ, ಒತ್ತಡ ರಹಿತ ಜೀವನ ನಡೆಸೋಣ. ಕಲಿಕೆಗೆ ಮಾಧ್ಯಮ ಮುಖ್ಯವಲ್ಲ ; ಸಾಧಿಸುವ ಛಲ ಬೇಕು ಎಂದು
ಡಾ. ಮುರಲೀಮೋಹನ್ ಚೂಂತಾರು ಹೇಳಿದರು. ಅವರು ಫೆ.28ರಂದು ‘ಸ್ನೇಹ ಆರೋಗ್ಯ ಕೇಂದ್ರ’ವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ವಿದ್ಯಾ ಶಾಂಭವ ಪಾರೆ ಮಾತನಾಡಿ ” ಶಿಕ್ಷಣ ನಿಂತ ನೀರಾಗಬಾರದು. ಅದು ಸದಾ ಬೆಳೆಯುತ್ತಿರುವ ಕ್ಷೇತ್ರ . ಕಲಿಕೆ ನಿರಂತರ . ಕಲಿಕೆಯಲ್ಲಿ ಅತೃಪ್ತಿ ಇದ್ದಾಗ ಇನ್ನಷ್ಟು ಕಲಿಯಲು ಸಾಧ್ಯ .ಆರೋಗ್ಯಯುತ ಮನಸ್ಸಿನಿಂದ ಕಲಿತಾಗ ಯಶಸ್ಸು ಸಾಧ್ಯ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಹಾಗೂ ಡಾ. ರಂಗಯ್ಯ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆರೋಗ್ಯ ಕೇಂದ್ರದ ವೈದ್ಯೆ ಡಾ. ಸುಶ್ಮಿತಾ ಎಂ. ಎಂ ಇವರು ಪ್ರಾಯೋಗಿಕ ಧ್ಯಾನದೊಂದಿಗೆ ಆರೋಗ್ಯದ ಜೀವನವನ್ನು ಹೇಗೆ ನಡೆಸಬೇಕೆಂದು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರದ ದಾಮ್ಲೆ ಅವರು ‘ಕಾಲ ಕೂಡಿ ಬಂದರೆ ಎಲ್ಲವೂ ಸಾಧ್ಯವೆಂಬಂತೆ ನನ್ನ ಬಹು ದಿನಗಳ ಕನಸು ನನಸಾಗಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಧನ್ಯವಾದಗಳನ್ನು ಅರ್ಪಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮನಶ್ಶಾಸ್ತ್ರಜ್ಞ ಶ್ರೀ ಅಕ್ಷರ ದಾಮ್ಲೆ ಇವರು ಕಾರ್ಯಕ್ರಮ ನಿರೂಪಿಸಿದರು. ಇದೇ ಸಮಾರಂಭದಲ್ಲಿ ಸುಳ್ಯದ ಸಾಧಕ ಡಾ. ಮುರಲೀಮೋಹನ್ ಚೂಂತಾರು ದಂಪತಿಗಳನ್ನು ಸನ್ಮಾನಿಸಲಾಯಿತು . ಮಕ್ಕಳ ತಜ್ಞ ಡಾ. ಶ್ರೀಕೃಷ್ಣ ಭಟ್, ಡಾ. ವಿದ್ಯಾಶಾರದ ಇನ್ನಿತರ ಗಣ್ಯರು, ಪೋಷಕರು ,ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.