Ad Widget

🔴ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ🔴

ಗುತ್ತಿಗಾರು : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ನಡೆಯಿತು. ಮೇ.19 ರಂದು ಗ್ರಾಮ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಕೊಂಬೊಟ್ಟು ಈ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದರು. ಬೇಸಿಗೆ ಶಿಬಿರದ ಎರಡನೇ ದಿನ ಸ.ಹಿ.ಪ್ರಾ ಶಾಲೆ ವಳಲಂಬೆ ಸಹಶಿಕ್ಷಕಿ ಶ್ರೀಮತಿ ಗೀತಾಲಕ್ಷ್ಮಿ ಓದುವ, ಬರೆಯುವ ಹವ್ಯಾಸ ಹೆಚ್ಚಿಸುವ ಕಥೆ, ಕವನ, ಸಂಭಾಷಣೆ ತಂಡ ರಚಿಸಿ ವಿವಿಧ ಚಟುವಟಿಕೆಗಳನ್ನು ಮಾಡಿಸಿದರು. ಮೂರನೇ ದಿನ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ಅವರು ಪತ್ರ ಬರವಣಿಗೆ ಮಾದರಿ ತಿಳಿಸಿ ಅಂಚೆ ಕಾರ್ಡ್ ವಿತರಿಸಿ ಪಂಚಾಯತ್ ಗೆ ಪತ್ರ ಬರೆಯಲು ತಿಳಿಸಿದರು. ನಾಲ್ಕನೇ ದಿನ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಲೋಕೇಶ್ ಪೀರನಮನೆ ವಿವಿಧ ಚಟುವಟಿಕೆಗಳ ಮೂಲಕ ತಮ್ಮ ಬುದ್ಧಿಶಕ್ತಿ ಹೆಚ್ಚಿಸುವ, ನಾಯಕತ್ವ ವಹಿಸುವ ಬಗ್ಗೆ ಮಾಹಿತಿ ನೀಡಿದರು. ಐದನೇ ದಿನ ಗ್ರಂಥಪಾಲಕಿ ಶ್ರೀಮತಿ ಅಭಿಲಾಷಾ ಹಾಗೂ ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ಗಣಿತ ಅಂಕಿ ಅಂಶಗಳು ವಿಜ್ಞಾನ ಸಂಬಂಧಿಸಿದಂತೆ ಮಾಹಿತಿ, ವೇದ ಗಣಿತದ ಪರಿಚಯ, ಅಂಕೆ ಇಂಗ್ಲಿಷ್ ಅಕ್ಷರ ಚಟುವಟಿಕೆಗಳನ್ನು ನಡೆಸಲಾಯಿತು. ಗ್ರಂಥಪಾಲಕರು ಮತ್ತು ತಂಡ ಗ್ರಾಮಪಂಚಾಯತ್, ಗ್ರಾಮ ಲೆಕ್ಕಾಧಿಕಾರಿ ಕಛೇರಿ ಹಾಗೂ ಘನತ್ಯಾಜ್ಯ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಯಿತು. ಆರನೇ ದಿನ ಜನಪದ ಕಲಾವಿದ ಗ್ರಂಥಾಲಯ ಸಮಿತಿಯ ಸದಸ್ಯರಾದ ರಮೇಶ್ ಮೆಟ್ಟಿನಡ್ಕ ಜನಪದ ಹಾಡು, ಪರಿಸರ ಹಾಡು, ರೈತಗೀತೆ, ಯಕ್ಷಗಾನ ಮುಂತಾದ ವಿಷಗಳ ಬಗ್ಗೆ ಹಾಡುಗಳನ್ನು ಕಲಿಸಿದರು.ಏಳನೇ ದಿನ ಸ್ಥಳೀಯ ಸಂಘ-ಸಂಸ್ಥೆಗಳ ಭೇಟಿ ಕಾರ್ಯದ ಅಂಗವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಮಾಹಿತಿಯನ್ನು ಮ್ಯಾನೇಜರ್ ನೀಡಿದರು. ಇದರ ಅಧೀನದ ನ್ಯಾಯಬೆಲೆ ಅಂಗಡಿ, ರಸಗೊಬ್ಬರ ಮಾರಾಟ ಕೇಂದ್ರ, ಕ್ಯಾಂಪ್ಕೋ ಖರೀದಿ ಕೇಂದ್ರ, ಹಾಲು ಸೊಸೈಟಿ, ಸಭಾಭವನ, ಸುವರ್ಣ ಮಾರ್ಟ್ ದಿನಸಿ ಮಳಿಗೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಯಿತು. ಅಂಚೆ ಕಚೇರಿಗೆ ಭೇಟಿ ನೀಡಿ ಮಕ್ಕಳು ಬರೆದ ಪೋಸ್ಟ್ ಕಾರ್ಡ್ ಗಳನ್ನು ಅಂಚೆ ಪೆಟ್ಟಿಗೆಗೆ ಹಾಕಿ ರವಾನಿಸಲಾಯಿತು. ಪೋಸ್ಟ್ ಮಾಸ್ಟರ್ ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ಗೆ ಭೇಟಿ ನೀಡಲಾಯಿತು. ಎಂಟನೇ ದಿನ ಹಿರಿಯ ಸಾಹಿತಿ ಹಿಮಕರ ಅರ್ನೋಜಿ ಅವರ ಮನೆ ಬಂಟಮಲೆ ಕಾಡಿನ ಪ್ರವಾಸ ಕೈಗೊಂಡು ಅವರ ಅವರ ಮನೆಯ ವಿನ್ಯಾಸ, ಪುಸ್ತಕ ಸಂಗ್ರಹ, ರಾಜರ ಕಾಲದ ಕತ್ತಿ ಸಂಗ್ರಹ, ಅಮರ ಸ್ವಾತಂತ್ರ್ಯ ಸಂಗ್ರಾಮದ ಕಥೆ ಜೊತೆಗೆ ಉಡುಗೊರೆಯಾಗಿ ಎಲ್ಲರಿಗೂ ಪುಸ್ತಕಗಳನ್ನು ನೀಡಿದರು. ಉರುಂಬಿ ಗಯ ನೀರಿನ ಪ್ರದೇಶ, ಸಣ್ಣ ಸೇತುವೆ, ಉರುಂಬಿ ಎಸ್ಟೇಟ್ ಗಾಜಿನ ಮನೆ, ಹಾಳೆತಟ್ಟೆ ಘಟಕ, ಕಲ್ಲುಪಣೆ ಮುಂತಾದ ಹಲವಾರು ವಿಷಯಗಳ ಬಗ್ಗೆ ಹಿಮಕರ ಅವರು ಮಾಹಿತಿ ನೀಡಿದರು. ಒಂಬತ್ತನೇ ದಿನ ಗ್ರಂಥಾಲಯದ ಸಭಾಭವನದಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರಾದ ಮಿತ್ರಕುಮಾರಿ ಚಿಕ್ಮುಳಿ ಹಾಗೂ ಸುಗಮಕಾರರಾಗಿ ಸೇವೆ ಸಲ್ಲಿಸಿದ ದಿವ್ಯ ಸುಜನ್ ಗುಡ್ಡೆಮನೆ ಅವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಹಿತನುಡಿಗಳನ್ನು ಹೇಳಿದರು. 8 ವಿದ್ಯಾರ್ಥಿಗಳಾದ ಜೀವನ್ಯ, ಸಾನ್ವಿ, ಭವಿಷ್, ನಿರೀಕ್ಷಾ, ಅನನ್ಯ, ಶ್ರೇಯಾ, ನಿಶಿತ, ಖುಷಿ ಅವರು 8 ದಿನ ವರದಿಯೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಗ್ರಂಥಪಾಲಕರು ಕಾರ್ಯಕ್ರಮ ನಿರ್ವಹಿಸಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಪೋಷಕರು, ಪಂಚಾಯತ್ ಸಿಬ್ಬಂದಿವರ್ಗ ಭಾಗವಹಿಸಿದ್ದರು. 24 ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು.

(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!