Ad Widget

ನಗರ ಹಸೀರೀಕರಣ ಪ್ರತಿಯೊಬ್ಬನ ಕರ್ತವ್ಯ- ವೇದವ್ಯಾಸ ಕಾಮತ್


ಮಂಗಳೂರು: ನಗರ ಪ್ರದೇಶದಲ್ಲೂ ನಿಯಮ ಪ್ರಕಾರ ಶೇ.22 ಹಸಿರೀಕರಣ ಬೇಕು. ಆದರೆ ಮಂಗಳೂರು ಮಹಾನಗರದಲ್ಲಿ ಕೆಲವೊಂದು ಪ್ರದೇಶದಲ್ಲಿ ಶೇ.14 ಇದ್ದರೆ, ಇನ್ನು ಕೆಲವು ವಾರ್ಡ್ ಶೇ.2,3ಕೂಡಾ ಇಲ್ಲ. ನಗರ, ಪರಿಸರ ಹಸೀರೀಕರಣಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅರಿತಾಗ ಪರಿಸರ ಸಂರಕ್ಷಣೆ ಕಷ್ಟಸಾಧ್ಯವೇನಲ್ಲ  ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನಗರದ ಲೇಡಿಹಿಲ್‌ನ ಪತ್ರಿಕಾಭವನ ಎದುರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಅರಣ್ಯ ಇಲಾಖೆ ವತಿಯಿಂದ ನಡೆದ ವನಮಹೋತ್ಸವ ಕಾಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಪ್ರಕೃತಿ ನಮಗೆ ನಮ್ಮ ಹಿರಿಯರು ಬಳುವಳಿಯಾಗಿ ನೀಡಿದ ಕೊಡುಗೆಯಾಗಿದ್ದು, ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮಗಿದೆ. ಮುಖ್ಯವಾಗಿ ಪ್ರಕೃತಿಯನ್ನು ಹಸಿರಾಗಿಸಿದರೆ ಕಾಲಕಾಲಕ್ಕೆ ಮಳೆ, ಬೆಳೆ ನಿರೀಕ್ಷೆ ಮಾಡಲು ಸಾಧ್ಯ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ 10ಸಾವಿರ ಗಿಡಗಳನ್ನು ನೆಡಲಾಗಿದೆ. ಇದೇ ರೀತಿ ನಗರದ ಅಭಿವೃದ್ಧಿಯೊಂದಿಗೆ ಹಸೀರೀಕರಣದ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿ ವರ್ಷ ವನಮಹೋತ್ಸವ ಆಚರಿಸುವ ಮೂಲಕ ಮಾದರಿಯಾಗಿದೆ ಎಂದರು.
*ಸ್ಕೂಲ್ ಝೋನ್ ಮಾರ್ಪಾಡು*: ನಗರದ ಲೇಡಿಹಿಲ್, ಆಗ್ನೇಸ್ ಸೇರಿದಂತೆ ಮೂರು ವೃತ್ತಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಈ ಮೂರು ವೃತ್ತಗಳನ್ನು ಸ್ಕೂಲ್ ಝೋನ್ ಗಳನ್ನಾಗಿ ಮಾರ್ಪಾಡು ಮಾಡಿ ಅಂತರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಹೆಚ್.ಆರ್. ನಾಯ್ಕ ಮಾತನಾಡಿ, ನೈಟ್ರೋಜನ್, ಆಕ್ಸಿಜನ್ ಹೆಚ್ಚಳದಿಂದ ಸಮಸ್ಯೆಯಿಲ್ಲ. ಕಾರ್ಬನ್ ಡೈ ಆಕ್ಸೈಡ್ ಸೂರ್ಯನ ಕಿರಣಗಳ ಶಕ್ತಿ ಹಿಡಿದಿಟ್ಟು ಉಷ್ಣತೆ ಹೆಚ್ಚಳ ಮಾಡುತ್ತಿದ್ದು, ಆಗ ಪ್ರಕೃತಿಯಲ್ಲಿ ಏರು-ಪೇರಾಗುತ್ತದೆ. ಪ್ರಕೃತಿಯಲ್ಲಿ ಗಿಡಗಳ ಸಂಖ್ಯೆ ಹೆಚ್ಚಾಗಿದ್ದರೆ  ಕಾರ್ಬನ್ ಡೈಆಕ್ಸೈಡ್‌ನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಹೆಚ್ಚಾಗಿ ಮರಗಳನ್ನು ಬೆಳೆಯಬೇಕು ಎಂದರು.
ಸಹಾಯಕ ಮುಖ್ಯ ಅರಣ್ಯಾಧಿಕಾರಿ ಶಂಕರೇಗೌಡ ಮಾತನಾಡಿ,  ವಾತಾವರಣದಲ್ಲಿ ಇಂಗಾಲದ ಪ್ರಮಾಣ ಸಮಸ್ಥಿತಿಯಲ್ಲಿದ್ದಾಗ ಉತ್ತಮ ಆರೋಗ್ಯ ಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡೋಣ ಎಂದರು.
ವಲಯ ಅರಣ್ಯಾಧಿಕಾರಿ ಶ್ರೀಧರ್ ಮಾತನಾಡಿ, ಮಂಗಳೂರು ನಗರದಲ್ಲಿ ಹಸೀರೀಕರಣ ದೃಷ್ಟಿಯಿಂದ ಹೆಚ್ಚು ಹೆಚ್ಚು ಗಿಡ-ಮರಗಳನ್ನು ನೆಡಲಾಗುತ್ತಿದ್ದು, 5 ವರ್ಷಗಳಿಂದ ಒಳ್ಳೆಯ ಪರಿಣಾಮ ಬೀರಿದೆ. ಅರಣ್ಯ ಇಲಾಖೆ ಗಿಡ ಮರಗಳನ್ನು ಬೆಳೆಸಲು ವಿಶೇಷ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಬಂದ ಗಣ್ಯರಿಗೆ ಪ್ರಾಕೃತಿಕವಾಗಿ ಬೆಳೆಸಿದ ಹೂ, ಲಕ್ಷ್ಮಣ ಫಲ ಹಾಗೂ ಹಲಸಿನ ಹಣ್ಣು ನೀಡಿ ವಿಭಿನ್ನವಾಗಿ ಸ್ವಾಗತಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು. ಆರ್.ಸಿ. ಭಟ್ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading