Ad Widget

ಸಾಮಾಜಿಕ ಸಾಮರಸ್ಯದ ಉದ್ದೇಶ ಲಡಾಕ್ ಗೆ ಕಾಲ್ನಡಿಗೆ – ಕಡಬದಿಂದ ನಡಿಗೆ ಆರಂಭಿಸಿದ ಮೂವರು ಯುವಕರು

ಚೀನಾ, ಟಿಬೆಟ್ ಹಾಗೂ ಪಾಕಿಸ್ತಾನಗಳಿಂದ ಸುತ್ತುವರೆದಿರುವ ಕೇಂದ್ರಾಡಳಿತ ಪ್ರದೇಶವಾದ ಲಡಾಕ್ ಗೆ ಕಾಲ್ನಡಿಗೆಯಲ್ಲಿ ತಲುಪುವ ಸಾಹಸದ ಕೆಲಸಕ್ಕೆ ಮುಂದಾಗಿರುವ ಕಡಬದ ಮೂವರು ಯುವಕರು ಸೋಮವಾರ ತಮ್ಮ ನಡಿಗೆಯನ್ನು ಕಡಬದಿಂದ ಆರಂಭಿಸಿದ್ದಾರೆ.
ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ವಿಮಲಗಿರಿಯ ಸಂಪ್ರೀತ್, ಐತ್ತೂರು ಗ್ರಾಮದ ಬೆತ್ತೋಡಿಯ ಸೆಬಾಸ್ಟಿಯನ್, ಕೋಣಾಜೆಯ ನಿಶಾಂತ್ ಎಂಬ ಮೂವರು ಯುವಕರು ಈ ಸಾಹಸಕ್ಕೆ ಕೈ ಹಾಕಿದವರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ಮುಗಿಸಿರುವ ಈ ಮೂವರು ಯುವಕರು ಮನೆಯವರ ಸಂಪೂರ್ಣ ಬೆಂಬಲದೊಂದಿಗೆ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಹೇಳುತ್ತಾರೆ.

ಯುವಕರು ಹೇಳುವಂತೆ “ಲಡಾಕ್ ಪ್ರದೇಶಕ್ಕೆ ಹದಿನೆಂಟು ವಯಸ್ಸಿನ ಕೆಳಗಿನವರು ಕಾಲ್ನಡಿಗೆಯಲ್ಲಿ ಹೊರಟಿರುವುದು ಇದೇ ಮೊದಲು. ನಾವು ಸುಮಾರು 3 ಸಾವಿರ ಕಿಲೋಮೀಟರ್ ದೂರದ ನಡಿಗೆ ನಡೆಯಬೇಕಾಗಿದ್ದು ಪ್ರತೀದಿನ 45 ಕಿಲೋಮೀಟರ್ ದೂರವನ್ನು ಕ್ರಮಿಸಿ 3 ತಿಂಗಳಲ್ಲಿ ಲಡಾಕ್ ತಲುಪಬೇಕೆನ್ನುವ ಗುರಿಯನ್ನು ಹೊಂದಿದ್ದೇವೆ. ಸಾಗುವ ದಾರಿಯಲ್ಲಿ ರೈತರನ್ನು ಬೇಟಿಯಾಗಿ ಮಾತು-ಕತೆ ನಡೆಸಿ ಅವರಿಗೆ ಸ್ಪೂರ್ತಿ ತುಂಬುವುದರೊಂದಿಗೆ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಪ್ರಯತ್ನ ನಮ್ಮದು. ಲಡಾಕ್ ತಲುಪಿದ ಬಳಿಕ ಅಲ್ಲಿ ಭಾರತದ ದ್ವಜ ಪ್ರದರ್ಶಿಸುವ ಮೂಲಕ ನಮ್ಮ ನಡಿಗೆ ಕೊನೆಗೊಳ್ಳಲಿದೆ. ಸಾಗುವ ದಾರಿ, ವಿವಿಧ ಪ್ರದೇಶಗಳ ಜೀವನಶೈಲಿ, ಕೃಷಿ ಚಟುವಟಿಕೆ ಮುಂತಾದವುಗಳನ್ನು ಚಿತ್ರೀಕರಣ ನಡೆಸಿ ಇರಿಸಿಕೊಳ್ಳುವುದರೊಂದಿಗೆ ನಮ್ಮ ನಡಿಗೆಯ ಕ್ಷಣ-ಕ್ಷಣದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಲಿದ್ದೇವೆ” ಎನ್ನುತ್ತಾರೆ ಯುವಕರು.
ಸೋಮವಾರ ಕಡಬ ತಾಲೂಕು ಕಛೇರಿ ಬಳಿ ಯುವಕರ ಹೆತ್ತವರು ಮತ್ತು ಹಿತೈಷಿಗಳು ಯುವಕರನ್ನು ಬೀಳ್ಕೊಟ್ಟರು.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!