
ಪ್ರಣವ ಸೌಹಾರ್ದ ಸಹಕಾರಿ ಸಂಸ್ಥೆಯ ಯಶಸ್ವಿ ದಶಕ ಪೂರ್ತಿಯ 11ನೆಯ ವಾರ್ಷಿಕ ಮಹಾಸಭೆ ಮಂಗಳೂರಿನ ಪದವಿನಂಗಡಿಯ ಬೆನಕ ಸಭಾಂಗಣದಲ್ಲಿ ರವಿವಾರ ನಡೆಯಿತು.
ಅಧ್ಯಕ್ಷ ಜಿ.ಆರ್. ಪ್ರಸಾದ್ ಅವರು ಸಂಸ್ಥೆಯ ಕಳೆದ ಆರ್ಥಿಕ ವರ್ಷದ ಆರ್ಥಿಕ ವರದಿ ಮಂಡಿಸಿ, ಸಂಸ್ಥೆಗೆ ಕಳೆದ ಆರ್ಥಿಕ ವರ್ಷದಲ್ಲಿ 66.64 ಲಕ್ಷ ರೂ. ಒಟ್ಟಾರೆ ಲಾಭವಿದ್ದು, 52.75 ಲಕ್ಷ ರೂ. ನಿವ್ವಳ ಲಾಭವಿದೆ. 3,500 ಲಕ್ಷ ರೂ. ಎಲ್ಲ ರೀತಿಯ ಠೇವಣಿ ನಿಧಿಯ ಆಧಾರವಿದೆ. ಸದಸ್ಯರ ಸಂಖ್ಯೆ 7,800 ಇದ್ದು 165 ಲಕ್ಷ ರೂ.ಪಾಲು ಬಂಡವಾಳವಿದೆ. 160 ಲಕ್ಷ ರೂ. ವಿವಿಧ ನಿಧಿಗಳಿದ್ದು ಸದಸ್ಯರಿಗೆ ಈ ವರ್ಷವೂ ಶೇ. 10 ಲಾಭಾಂಶ ಹಂಚಲು ನಿರ್ಧರಿಸಲಾಯಿತು ಎಂದರು.
ಇ ಸಂಸ್ಥೆ ಲೆಕ್ಕ ಪತ್ರ ಪರಿಶೋಧನೆಯಲ್ಲಿ ‘ಎ’ ದರ್ಜೆ ಮಾನ್ಯತೆ ಉಳಿಸಿಕೊಂಡಿದೆ. ಸಾಲ ವಸೂಲಾತಿಯಲ್ಲೂ ಉತ್ತಮ ಫಲಿತಾಂಶ ತೋರಿದೆ. ಕಳೆದ ಆರ್ಥಿಕ ವರ್ಷದಲ್ಲಿ ಖರೀದಿಸಿದ ನಿವೇಶನದಲ್ಲಿ ಈ ವರ್ಷ ಪ್ರಣವ ತನ್ನ ಪ್ರಧಾನ ಕಚೇರಿ ಕಟ್ಟಡ ನಿರ್ಮಿಸುವ ಯೋಜನೆ ಇದ್ದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ನಿರ್ದೇಶಕ ಹಾಗೂ ಪ್ರಣವ ಚಾರಿಟೇಬಲ್ ಟ್ರಸ್ಟ್ನ ಕೋಶಾಧಿಕಾರಿ ಸೋಮಪ್ಪ ನಾಯಕ್ ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ವಿವರಿಸಿದರು. ಅನಾರೋಗ್ಯ ಪೀಡಿತ ಸದಸ್ಯರಾದ ರಘುವೀರಗಟ್ಟಿ ಗಣೇಶ್ ಭಟ್ ಮತ್ತು ಮಂಗಳೂರು ಮಂಜನಾಡಿಯಲ್ಲಿ ಮನೆ ಕುಸಿದು ಮಕ್ಕಳನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವಿನಿ ಅವರಿಗೆ ಆರ್ಥಿಕ ಸಹಾಯ ನೀಡಲಾಯಿತು.
ಲೆಕ್ಕ ಪರಿಶೋಧಕ ಸಿಎ ಅನಂತ ಪದ್ಮನಾಭ, ಆಂತರಿಕ ಲೆಕ್ಕ ಪರಿಶೋಧಕ ಸಿಎ ಶ್ರಾವಣಿ, ನಿರ್ದೇಶಕ ರವೀಂದ್ರನಾಥ್ ಪಿ., ಸುಬ್ರಹ್ಮಣ್ಯ ಭಟ್, ರವಿಶಂಕರ್ ಪಿ.ಎನ್., ಪದ್ಮರಾಜ್ ಬಲ್ಲಾಳ್, ದಯಾಸಾಗರ ಪೂಂಜಾ, ಭಗವಾನ್ ದಾಸ್ ಅಡ್ಯಂತಾಯ, ಡಾ| ಶ್ಯಾಮಪ್ರಸಾದ್ ಶೆಟ್ಟಿ ಜಗದೀಶ್ ಶೆಟ್ಟಿ ಬಿಜೈ, ಡಾ। ವೆಂಕಟೇಶ್, ಜಯಲಕ್ಷ್ಮಿ ಚಂದ್ರಹಾಸ್, ಮೀರಾ ಕರ್ಕೇರ, ವೃತಿಪರ ನಿರ್ದೇಶಕ ಸತೀಶ್ ಭಟ್, ಮಮತಾ ರಾವ್, ಕಾರ್ಯೋನ್ಮುಖ ನಿರ್ದೇಶಕ ಕೃಷ್ಣ ಕಾಮತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ವೈ. ಶೆಟ್ಟಿಗಾರ್ ಮತ್ತು ಸಂಸ್ಥೆಯ ಸಿಬಂದಿ ಹಾಜರಿದ್ದರು.ಉಪಾಧ್ಯಕ್ಷ ಪ್ರಶಾಂತ್ ಪೈ ಸ್ವಾಗತಿಸಿದರು. ನಿರ್ದೇಶಕ ವೆಂಕಟೇಶ ವಂದಿಸಿದರು. ಸದಸ್ಯ ಬಾಲಕೃಷ್ಣ ನಿರೂಪಿಸಿದರು.
