
✍️ ಉಲ್ಲಾಸ್ ಕಜ್ಜೋಡಿ
ವಾರ್ಷಿಕ ಬೇಸಿಗೆ ರಜೆ ಮುಗಿದು ವಿದ್ಯಾರ್ಥಿಗಳು ಮತ್ತೆ ಶಾಲೆಗಳತ್ತ ಮುಖ ಮಾಡಿದ್ದು, ಶಾಲೆಗೆ ತೆರಳಲು ಪ್ರಾರಂಭಿಸಿದ್ದಾರೆ. ಆದರೆ ವಿಪರ್ಯಾಸವೆಂದರೆ ಪ್ರತೀ ವರ್ಷವೂ ಕೂಡ ವಿದ್ಯಾರ್ಥಿಗಳಿಗೆ ವಾರ್ಷಿಕ ಬೇಸಿಗೆ ರಜೆ ಮುಗಿದು ಮತ್ತೆ ಶಾಲೆಗಳು ಪ್ರಾರಂಭವಾಗುವ ಸಂದರ್ಭದಲ್ಲಿ ಮಳೆಯೂ ಕೂಡ ನಿರಂತರವಾಗಿ ಸುರಿಯಲು ಪ್ರಾರಂಭಿಸುತ್ತದೆ. ಕಾಕತಾಳೀಯವೆಂಬಂತೆ ಮಳೆಗಾಲದ ಸಂದರ್ಭದಲ್ಲಿ ಬೆಳಿಗ್ಗೆ ವಿದ್ಯಾರ್ಥಿಗಳು ತಮ್ಮ ಮನೆಯಿಂದ ಶಾಲೆಗೆ ತೆರಳುವಾಗ ಹಾಗೂ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗುವಾಗ ಮಳೆ ಕಾದು ಕುಳಿತಂತೆ ಜೋರಾಗಿ ಸುರಿಯಲು ಪ್ರಾರಂಭಿಸುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟುಮಾಡುತ್ತಲೇ ಇರುತ್ತದೆ. ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಕಷ್ಟವಂತೂ ಹೇಳತೀರದು, ಏಕೆಂದರೆ ಬೆಳಿಗ್ಗೆ ಮನೆಯಿಂದ ಶಾಲೆಗೆ ತೆರಳುವ ಹಾಗೂ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಮಳೆ ಸುರಿದರೆ ವಿದ್ಯಾರ್ಥಿಗಳ ಬ್ಯಾಗ್, ಪುಸ್ತಕಗಳು ಹಾಗೂ ಸಮವಸ್ತ್ರ ಒದ್ದೆಯಾಗಿ ವಿದ್ಯಾರ್ಥಿಗಳು ಜ್ವರ-ಶೀತದಿಂದ ಬಳಲುವುದು ಒಂದೆಡೆಯಾದರೆ ಗ್ರಾಮೀಣ ಪ್ರದೇಶಗಳಲ್ಲಿ ನದಿ-ಹಳ್ಳಗಳು ಹೆಚ್ಚಾಗಿ ಇರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಈ ನದಿ-ಹಳ್ಳಗಳು ತುಂಬಿ ಹರಿಯಲು ಪ್ರಾರಂಭಿಸಿ ವಿದ್ಯಾರ್ಥಿಗಳು ತೆರಳುವ ದಾರಿಯನ್ನು ಹೆಚ್ಚು ದುಸ್ತರ ಹಾಗೂ ಅಪಾಯಕಾರಿಯಾಗಿಸುತ್ತವೆ. ಹಾಗೂ ಕೆಲವೊಂದು ಸಂದರ್ಭಗಳಲ್ಲಿ ಈ ನದಿ-ಹಳ್ಳಗಳು ನಿರಂತರ ಮಳೆಯಿಂದಾಗಿ ಅಪಾಯದ ಮಟ್ಟವನ್ನು ಮೀರಿ ಹರಿಯಲು ಪ್ರಾರಂಭಿಸುತ್ತವೆ. ಅಷ್ಟೇ ಅಲ್ಲದೇ ಹಳ್ಳಿಗಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಚ್ಚಾ ರಸ್ತೆಗಳು ಅಥವಾ ಮಣ್ಣಿನ ರಸ್ತೆಗಳೇ ಇರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಕೆಲವೊಂದು ಕಡೆಗಳಲ್ಲಿ ಈ ರಸ್ತೆಗಳು ಹದಗೆಟ್ಟು ಸಂಪೂರ್ಣ ಕೆಸರುಮಯವಾಗಿ ವಾಹನ ಸಂಚಾರಕ್ಕೂ ಕಷ್ಟಕರವಾಗುವ ಪರಿಸ್ಥಿತಿಗೆ ಬಂದು ತಲುಪಿರುತ್ತವೆ.
ಹಾಗಾಗಿ ಮಳೆಗಾಲದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ ಮನೆಯಿಂದ ಶಾಲೆಗೆ ತೆರಳುವಾಗ ಹಾಗೂ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗುವಾಗ ಎಚ್ಚರಿಕೆಯಿಂದ ಸಾಗಬೇಕಿದೆ ಹಾಗೂ ಪೋಷಕರು ಕೂಡ ಎಚ್ಚರಿಕೆ ವಹಿಸಬೇಕಿದೆ…✍️ ಉಲ್ಲಾಸ್ ಕಜ್ಜೋಡಿ
