
✍️
ಕಿಶನ್ ಎಂ. ಪೆರುವಾಜೆ
ಪ್ರತಿದಿನವೂ ಪರಿಸರ ದಿನಾಚರಣೆ ಮಾಡುವಂತಹ ಕಾಯಕ ನಮ್ಮಿಂದಾಗಬೇಕಿದೆ. ಪ್ರಸ್ತುತ ಸನ್ನಿವೇಶದಲ್ಲಿ ಶುದ್ಧ ಪರಿಸರದ ಮಹತ್ವದ ಅರಿವು ಜನತೆಗೆ ನೀಡಬೇಕಾಗಿದೆ. ಇಂದಿನ ಪರಿಸರದ ವ್ಯವಸ್ಥೆ ಬಿಗಡಾಯಿಸಿದೆ. ಅಭಿವೃದ್ಧಿಯ ನೆಪದಲ್ಲಿ ದಿನೇ ದಿನೇ ಪರಿಸರ ನಾಶವಾಗುತ್ತಿದ್ದು ಇದರಿಂದ ಪರಿಸರದಲ್ಲಿ ಅಸಮತೋಲನುಂಟಾಗಿ ಅತಿವೃಷ್ಟಿ, ಅನಾವೃಷ್ಟಿಗಳು ಎದುರಾಗಿರುವುದನ್ನು ಕಾಣಬಹುದಾಗಿದೆ. ಇಂದು ಪ್ರಗತಿ ಎಷ್ಟೇ ಮುಂಚೂಣಿಯಲ್ಲಿದ್ದರೂ ಕೂಡ ನೈಸರ್ಗಿಕ ವಿಕೋಪಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವುದನ್ನು ಮಾನವ ಇನ್ನು ತನ್ನಲ್ಲಿ ಬೆಳೆಸಿಕೊಂಡಿಲ್ಲವೆಂದು ಹೇಳಬಹುದು. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ ಕೆಲವು ವಾರಗಳ ಹಿಂದೆಯಷ್ಟೇ ಸುರಿದ ವಿಪರೀತ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಗುಡ್ಡಜರಿತ, ಪರಿಸರ ಹಾನಿ,ಜೀವ ಹಾನಿ, ಇವೆಲ್ಲವನ್ನು ತನಗೆ ತಾನೆ ತಂದೊಡ್ಡಿರುವುದೇ ಅಭಿವೃದ್ಧಿಯ ನೆಪದಿಂದಾಗಿ. ನಾಗರಿಕರು ಪರಿಸರದ ಮೂಲ ನಿಯಮಗಳನ್ನು ಉಲ್ಲಂಘಿಸಿ, ಐಶಾರಾಮಿ ಜೀವನ ನಡೆಸುತ್ತಿರುವುದೇ ಪರಿಸರದ ಏರಳಿತಗಳಿಗೆ ಬಹು ಮುಖ್ಯ ಕಾರಣವಾಗಿದೆ. ಅದಲ್ಲದೆ ಬಗೆ ಬಗೆಯ ರೋಗ- ರುಜಿನಗಳು ಹರಡಲು ವಿವಿಧ ಬಗೆಯ ರಾಸಾಯನಿಕ ವಸ್ತುಗಳ ಬಳಕೆ ಕೈಮೀರಿ ಹೋಗಿವೆ. ಬಿಸಿಲಿನ ತಾಪಮಾನವು ಕೂಡ ಹೆಚ್ಚಿದೆ. ವಾಹನಗಳಿಂದ ಉಗುಳುವ ಹೊಗೆ, ಕಾರ್ಖಾನೆಗಳಿಂದ ಹೊರಬರುವ ಘನ ತ್ಯಾಜ್ಯಗಳು ಇವೆಲ್ಲ ಜೀವ ಸಂಕುಲದ ನೆಮ್ಮದಿಯ ಬದುಕಿಗೆ ಕುತ್ತು ತಂದಿವೆ. ಇದರಿಂದಾಗಿ ಹಲವು ಬಗೆಯ ಅನಾಹುತಗಳಿಗೆ ಪರಿಸರದ ಅಶುದ್ಧತೆಯೇ ಆಗಿದೆಂದು ಹೇಳಿದರೆ ತಪ್ಪಾಗಲಾರದು. ಆದ್ದರಿಂದ ಈ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭೂಮಂಡಲದ ಸಂರಕ್ಷಣೆ ಹಾಗೂ ಶುದ್ಧತೆಯ ಕಡೆಗೆ ಇನ್ನಾದರೂ ಕೈ ಚಾಚಾ ಬೇಕಿದೆ. ನಾವು ಹೇಗೆ ದಿನನಿತ್ಯ ಶುಚಿಗೊಳ್ಳುತ್ತೇವೆ ಹಾಗೆಯೇ ಪರಿಸರವೂ ನಮ್ಮ ಜೀವನದ ಅವಿಭಾಜ್ಯ ಅಂಗವೆಂದು ಭಾವಿಸುತ್ತಾ “ ಶುದ್ಧತೆ ಇಲ್ಲದೆ ಪರಿಸರವಿಲ್ಲ ಹಾಗೆಯೇ ಅಶುದ್ಧತೆಯಾದರೆ ನಾವಿಲ್ಲ “ ಎಂಬ ಭೀಷ್ಮ ಪ್ರತಿಜ್ಞೆಯನ್ನು ಮಾಡೋಣ ಬನ್ನಿ…
“ ಹಸಿರೇ ಉಸಿರು” ಎಲ್ಲರಿಗೂ ಪರಿಸರ ದಿನದ ಶುಭಾಶಯಗಳು.
ಕಿಶನ್ ಎಂ.. ✍️ ಪವಿತ್ರ ನಿಲಯ ಪೆರುವಾಜೆ.
