
ಕೊಲ್ಲಮೊಗ್ರು ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯ ಸಹಶಿಕ್ಷಕರಾದ ಕೆ.ಕೆ ವೆಂಕಟ್ರಮಣ ಕೊಪ್ಪಡ್ಕ ರವರು ಸೇವಾ ನಿವೃತ್ತಿಯನ್ನು ಹೊಂದಿದ್ದು, ಸುಧೀರ್ಘ 36 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಕಲ್ಮಕಾರು ಗ್ರಾಮದ ಕೊಪ್ಪಡ್ಕ ದಿ| ಕುಶಾಲಪ್ಪ.ಕೆ.ಎಸ್ ಹಾಗೂ ದಿ| ಹೊನ್ನಮ್ಮ ದಂಪತಿಗಳ ಪುತ್ರ.
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ ಶಾಲೆ ಕಲ್ಮಕಾರು ಇಲ್ಲಿ ಪಡೆದಿದ್ದು, ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಪಡೆದಿದ್ದಾರೆ.
ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ಪದವಿಯನ್ನು ಪಡೆದ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ.
1990 ರಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕೊಲ್ಲಮೊಗ್ರು ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯಗಳನ್ನು ಬೋಧಿಸುತ್ತಿದ್ದು, ಹೆಚ್ಚುವರಿಯಾಗಿ ಸ್ಕೌಟ್ ಶಿಕ್ಷಣ ನೀಡುತ್ತಿದ್ದರು.
ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಸಕ್ರೀಯರಾಗಿದ್ದ ಇವರು ಕಲ್ಮಕಾರು ಸರ್ವೋದಯ ಯುವಕ ಮಂಡಲದ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅದರೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಮಕಾರು ಒಕ್ಕೂಟದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಇವರು ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಪತ್ನಿ ಪುಷ್ಪಾವತಿ ಗೃಹಿಣಿಯಾಗಿದ್ದು, ಪುತ್ರಿ ಸೃಜನಾ.ಕೆ.ವಿ ಹಾಗೂ ಪುತ್ರ ಹೃತಿಕ್.ಕೆ.ವಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)
