
ಕುಕ್ಕೆ ಶ್ರೀ ಸುಬಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಇಂಜಾಡಿಯವರು ಅವಿರೋಧವಾಗಿ ಆಯ್ಕೆಯಾದ ಬಳಿಕ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್ ಖಂಡನೆ ವ್ಯಕ್ತಡಿಸಿದೆ.
ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಹರೀಶ್ ಇಂಜಾಡಿಯವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸತತವಾಗಿ ಮೂರು ಬಾರಿಗೆ ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರಾಗಿ ಇವರೊಬ್ಬರೇ ಗೆಲ್ಲುವ ಮೂಲಕ ಸುಬ್ರಹ್ಮಣ್ಯದ ಜನತೆ ಪ್ರೀತಿಯಿಂದ ಸ್ವೀಕರಿಸಿರುವುದು ಕಂಡು ಬರುತ್ತದೆ. ಹಾಗಾಗಿ ಹರೀಶ್ ಇಂಜಾಡಿಯವರು ಸಹಜವಾಗಿಯೇ ದೇವಸ್ಥಾನದ ಅಧ್ಯಕ್ಷ ಪದವಿಗೆ ಅರ್ಹರಾಗಿರುತ್ತಾರೆ. ಇವರು ದೇವಸ್ಥಾನದ ಒಳ ಮತ್ತು ಹೊರಗಿನ ಎಲ್ಲಾ ಕಾರ್ಯ ವೈಖರಿಯನ್ನು ಬಹಳ ಹತ್ತಿರದಿಂದ ಕಂಡವರಾಗಿದ್ದು, ದೇವಸ್ಥಾನದ ಒಳಗಿನ ಆಗುಹೋಗುಗಳ ವಿಚಾರಗಳ ಸಂಪೂರ್ಣ ಅರಿವು ಮತ್ತು ಪರಿಜ್ಞಾನ ಹೊಂದಿದ್ದಾರೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ತಪ್ಪು ಕಂಡಾಗ ಯಾವುದೇ ಅಳಕು ಮತ್ತು ಭಯವಿಲ್ಲದೆ ಪ್ರಸ್ತಾಪಿಸಿ ಉತ್ತಮ ಆಡಳಿತವನ್ನು ಕೊಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ವಸ್ತು ನಿಷ್ಠವಾಗಿ ನಿಷ್ಠುರತೆಯಿಂದ ಕರಾರುವಕ್ಕಾಗಿ ಮಾತನಾಡುವ ವ್ಯಕ್ತಿಗಳಿಗೆ ರಾಜಕಾರಣದಲ್ಲಿ ಪಕ್ಷದ ಒಳಗೆ ಮತ್ತು ಹೊರಗೆ ವಿರೋಧಿಗಳಿರುವುದು ಸಹಜ. ದೇವಸ್ಥಾನದ ಅಧ್ಯಕ್ಷರಾಗುವ ಪೂರ್ವದಲ್ಲಿ ಮತ್ತು ನಂತರದಲ್ಲಿ ಇವರ ಹಿತ ಶತ್ರುಗಳು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಪಿತೂರಿಯನ್ನು ಮಾಡಿದ್ದಾರೆ. ನಿರಪರಾಧಿ ಎಂದು ಸಾಬೀತಾಗಿದ್ದರೂ 20 ವರ್ಷಗಳ ಹಿಂದಿನ ಕೆಲವೊಂದು ಘಟನೆಗಳನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳನ್ನು ಹರಿಬಿಡುವ ಪ್ರಯತ್ನವನ್ನು ಮಾಡಿ ಇವರ ವೈಯಕ್ತಿಕ ವರ್ಚಸ್ಸಿಗೆ ಕುಂದು ತರುವ ಪ್ರಯತ್ನ ಹಾಗೂ ತೇಜೋವಧೆಯನ್ನು ಮಾಡಿದ್ದಾರೆ. ಇದನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸುತ್ತೇವೆ ಮತ್ತು ಅವರಿಗೆ ನೈತಿಕ ಬೆಂಬಲವನ್ನು ನೀಡಿ ಉತ್ತಮ ಆಡಳಿತವನ್ನು ನೀಡುವರೇ ಅವರಿಗೆ ಬಾಹ್ಯವಾಗಿ ಶಕ್ತಿಯನ್ನು ನೀಡುತ್ತೇವೆ. ಮುಂದೆ ಅಧ್ಯಕ್ಷತೆಗೆ ಸರಕಾರದ ಕಡೆಯಿಂದ ತೊಂದರೆ ಆದಲ್ಲಿ ಅದರ ವಿರುದ್ಧ ಹೋರಾಡಲು ಸನ್ನದ್ಧರಾಗಿದ್ದೇವೆ ಮತ್ತು ಅಂತಹ ಸಂದರ್ಭದಲ್ಲಿ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಅವರ ಜೊತೆ ಕೈ ಜೋಡಿಸುತ್ತೇವೆ. ಗಂಭೀರ ಪರಿಸ್ಥಿತಿಯನ್ನು ಕಾಂಗ್ರೆಸ್ ಪಕ್ಷದೊಳಗೆ ಹಾಗೂ ಸಮಾಜದಿಂದ ಎದುರಿಸಬೇಕಾದಿತು ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಡಬ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಅಭಿಲಾಶ್, ನಿಕಟ ಪೂರ್ವ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕುಕ್ಕೆ ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳಾದ ಸತೀಶ್ ಕೂಜುಗೋಡು ,ಪವನ್ ಎಂ ಡಿ, ಅಚ್ಯುತ ಗೌಡ ಬಳ್ಪ , ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಮುಖಂಡರುಗಳಾದ ಶಿವರಾಮ ರೈ, ಕಿಶೋರ್ ಅರಂಪಾಡಿ, ಮಹಿಳಾ ಸಮಿತಿ ಅಧ್ಯಕ್ಷೆ ರತ್ನ ಉಪಸ್ಥಿತರಿದ್ದರು.
