
ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಅರ್ಭಟ ಜೋರಾಗಿದೆ, ಬಾಹ್ಯ ವಾತಾವರಣದ ಉಷ್ಣತೆ 42 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗಿದೆ. ಇಂತಹ ಬಿಸಿಲಿನ ಹೊಡೆತಕ್ಕೆ ನಮ್ಮ ದೇಹ ಬಳಲಿ ಬೆಂಡಾಗಿ ಹೀಟ್ ಸ್ಟ್ರೋಕ್ಗೆ ತುತ್ತಾಗುತ್ತದೆ. ಈ ವಿಪರೀತ ಬಿಸಿಲಿನ ಕಾರಣದಿಂದ ದೇಹಕ್ಕೆ ಉಂಟಾಗುವ ಆಘಾತವನ್ನು ಸನ್ಸ್ಟ್ರೋಕ್ ಅಥವಾ ಶಾಖಾಘಾತ ಎಂದೂ ಕರೆಯುತ್ತಾರೆ.
ನಮ್ಮ ದೇಹದಲ್ಲಿ ನಿರಂತರವಾಗಿ ಚಯಾಪಚಯ ಜೈವಿಕ ಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಈ ಜೈವಿಕ ಕ್ರಿಯೆಯ ಸಂದರ್ಭದಲ್ಲಿ ದೇಹದಲ್ಲಿ ಶಾಖ ಉತ್ಪಾದನೆಯಾಗುತ್ತದೆ. ಈ ಶಾಖ ಚರ್ಮದ ಮುಖಾಂತರ, ಶಾಖದ ವಿಕಿರಣದಿಂದ ಅಥವಾ ಬೆವರುವಿಕೆಯಿಂದ ದೇಹದಿಂದ ಹೊರ ಹಾಕಲ್ಪಡುತ್ತದೆ. ಆದರೂ ಕೆಲವೊಮ್ಮೆ ತೀವ್ರವಾದ ಸೂರ್ಯನ ಶಾಖ, ಹೆಚ್ಚಿದ ಆದ್ರತೆ ಮತ್ತು ಬಿಸಿಲಿನ ಧಗೆಯನ್ನು ಲೆಕ್ಕಿಸದೆ ಮಾಡುವ ದೈಹಿಕ ಪರಿಶ್ರಮದ ಕೆಲಸದ ಸಂದರ್ಭದಲ್ಲಿ, ದೇಹಕ್ಕೆ ತನ್ನೊಳಗೆ ಉಂಟಾದ ಶಾಖವನ್ನು ಹೊರ ಹಾಕಲು ಸಾಧ್ಯವಾಗದೇ ಇರಬಹುದು. ಆಗ ದೇಹದ ಉಷ್ಣತೆಯು 106oಈ ಅಥವಾ 41.1 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗಬಹುದು. ಇದಲ್ಲದೆ ಕೆಲವೊಮ್ಮೆ ದೇಹಕ್ಕೆ ಬೇಕಾದ ಸೂಕ್ತ ಪ್ರಮಾಣದ ನೀರಿನಾಂಶ ದೊರಕದೆ ಇದ್ದಾಗ ದೇಹ ನಿರ್ಜಲೀಕರಗೊಳ್ಳುತ್ತದೆ. ಈ ಕಾರಣದಿಂದ ನೀರಿನ ಕೊರತೆಯಿಂದ ವ್ಯಕ್ತಿಯ ಬೆವರುವಿಕೆ ಕಡಿಮೆಯಾಗಿ ದೇಹದೊಳಗೆ ಉತ್ಪಾದನೆಯಾದ ಶಾಖ ಪರಿಣಾಮಕಾರಿಯಾಗಿ ಹೊರ ಹಾಕಲು ಸಾಧ್ಯವಾಗದೇ ದೇಹದ ಉಷ್ಣತೆ ಹೆಚ್ಚಾಗಿ, ಸನ್ ಸ್ಟ್ರೋಕ್ಗೆ ಕಾರಣವಾಗಬಹುದು.
ಶಾಖಾಘಾತದ ಲಕ್ಷಣಗಳು ಏನು?
- ವಿಪರೀತ ಆಯಾಸ, ಸುಸ್ತು, ವಾಂತಿ, ವಾಕರಿಕೆ, ಕಿರಿಕಿರಿ, ದೌರ್ಬಲ್ಯ, ತಲೆನೋವು, ತಲೆಸುತ್ತುವುದು, ಸ್ನಾಯು ಸೆಳೆತ ಮತ್ತು ಸ್ನಾಯುಗಳಲ್ಲಿ ನೋವು ಕಂಡು ಬರುತ್ತದೆ. ಲಕ್ಷಣಗಳು ಇಲ್ಲದಲ್ಲಿಯೂ ಒಂದೇ ರೀತಿ ಇರಬಹುದು. ವ್ಯಕ್ತಿಯ ದೇಹದ ಪ್ರಕೃತಿ, ದೇಹದ ತೂಕ ಮತ್ತು ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ವಿಭಿನ್ನ ವ್ಯಕ್ತಿಗಳಲ್ಲಿ ವಿಭಿನ್ನವಾಗಿ ಪ್ರಕಟಗೊಳ್ಳಬಹುದಾಗಿದೆ.
- ಉಸಿರಾಟದ ತೀವ್ರತೆ ಮತ್ತು ಹೃದಯದ ಬಡಿತ ಹೆಚ್ಚಳವಾಗುತ್ತದೆ. ದೇಹದ ಉಷ್ಣತೆ ಏರುವುದು (ಹೈಪರ್ಥರ್ಮಿಯ) ಬೆವರದೇ ಇರುವುದು, ಬಿಸಿ ಕೆಂಪು ಅಥವಾ ಒಣ ತ್ವಚೆ ಇರುತ್ತದೆ.
- ನಾಡಿ ಬಡಿತ ಜೋರಾಗಬಹುದು, ರಕ್ತದೊತ್ತಡ ಕಡಿಮೆಯಾಗುವುದು, ಉಸಿರಾಟದ ತೊಂದರೆ ಕಂಡು ಬರುವುದು.
- ಭ್ರಮೆ, ಗೊಂದಲ, ತಳಮಳ, ದಿಗ್ಭ್ರಮೆ, ವಿಚಿತ್ರವಾದ ನಡವಳಿಕೆ ಕಂಡು ಬರುವುದು.
- ಯಾವುದೇ ಚಿಕಿತ್ಸೆ ತಕ್ಷಣವೇ ದೊರಕದೇ ಇದ್ದಲ್ಲಿ ವ್ಯಕ್ತಿ ಹಠಾತ್ತನೆ ಕೋಮಾಕ್ಕೆ ಜಾರುವ ಸಾಧ್ಯತೆ ಇರುತ್ತದೆ.
ಯಾರಲ್ಲಿ ಹೆಚ್ಚು ಕಂಡುಬರುತ್ತದೆ?
- ಶಿಶುಗಳು ಮತ್ತು ಹೆಚ್ಚು ವಯಸ್ಸಾದವರಲ್ಲಿ ಈ ಸನ್ ಸ್ಟ್ರೋಕ್ ಹೆಚ್ಚು ಕಂಡುಬರುತ್ತದೆ. ಹೃದಯ ಸಂಬ0ಧಿ ಕಾಯಿಲೆ ಇರುವವರು, ಶ್ವಾಸಕೋಶದ ಕಾಯಿಲೆ ಇರುವವರು, ಮೂತ್ರ ಪಿಂಡದ ಸಮಸ್ಯೆ ಇರುವವರು ಮತ್ತು ದೇಹದ ರಕ್ಷಣಾ ವ್ಯವಸ್ಥೆ ಕುಸಿದ ಕಾಯಿಲೆ ಇರುವವರಲ್ಲಿ ಶಾಖಾಘಾತ ಹೆಚ್ಚು ಕಂಡುಬರುತ್ತದೆ.
- ಹೊರಾಂಗಣ ಆಟದಲ್ಲಿ ತೊಡಗಿಸಿಕೊಳ್ಳುವ ಕ್ರೀಡಾಪಟುಗಳಲ್ಲಿ ಹೆಚ್ಚು ಕಂಡುಬರುತ್ತದೆ. ಕ್ರಿಕೆಟ್, ವಾಲಿಬಾಲ್, ಪುಟ್ಬಾಲ್, ತ್ರೋಬಾಲ್, ಹಾಕಿ ಇತ್ಯಾದಿ ಕ್ರೀಡೆಗಳಲ್ಲಿ ಇದೇ ಸರ್ವೆಸಾಮಾನ್ಯ.
- ಕಛೇರಿಯಿಂದ ಹೊರಗಡೆ ಕೆಲಸ ಮಾಡುವವರು, ಹೊರಾಂಗಣದಲ್ಲಿ ಸರ್ಯನ ಶಾಖ ತಡೆದುಕೊಂಡು ಕೆಲಸ ಮಾಡುವವರು ಮತ್ತು ಸೂರ್ಯನ ಕೆಳಗೆ ದೈಹಿಕ ಶ್ರಮವುಳ್ಳ ಕೆಲಸ ಮಾಡುವವರಲ್ಲಿ ಶಾಖಾಘಾತ ಬಹಳ ಸಾಮಾನ್ಯ.
ಏನು ಪ್ರಥಮಚಿಕಿತ್ಸೆ ನೀಡಬೇಕು? - ಶಾಖಾಘಾತಕ್ಕೆ ತುತ್ತಾದ ವ್ಯಕ್ತಿಯನ್ನು ನೆರಳಿರುವ ತಂಪಾಗಿರುವ ಪ್ರದೇಶಕ್ಕೆ ಕರೆದೊಯ್ದು ಬಟ್ಟೆಗಳನ್ನು ಸಡಿಲಿಸಿ ಚರ್ಮಕ್ಕೆ ತಂಪಾದ ಗಾಳಿ ಮತ್ತು ನೀರನ್ನು ಸಿಂಪಡಿಸಬೇಕು ಬೆವರುವಿಕೆಯನ್ನು ಉತ್ತೇಜಿಸಬೇಕಾದ ಕ್ರಿಯೆಯನ್ನು ಹೆಚ್ಚುಗೊಳಿಸಬೇಕು ತೊಡೆಸಂಧಿ ಮತ್ತು ಕೈ ಸಂಧಿಗಳಲ್ಲಿ ಐಸ್ ಪ್ಯಾಕ್ ಇಡಬೇಕು.
- ವ್ಯಕ್ತಿಗೆ ಆಹಾರ ಸೇವಿಸಲು ಸಾದ್ಯವಾದಲ್ಲಿ, ಆತನಿಗೆ ತಂಪಾದ ನೈಸರ್ಗಿಕ ಪೇಯಗಳಾದ ನೀರು, ಎಳನೀರು, ಲಿಂಬೆ ಜ್ಯೂಸ್, ಹಣ್ಣಿನರಸ, ನೀಡಬಹುದು. ಕೃತಕಪಾನೀಯಗಳಾದ ಪೆಪ್ಸಿ, ಕೋಕ್ ನೀಡಬೇಡಿ. ಆಲ್ಕೋಹಾಲ್ಯುಕ್ತ ಮತ್ತು ಕೆಫಿನ್ಯುಕ್ತ ಪಾನೀಯಗಳನ್ನು ಬಳಸಬಾರದು.
- ದೇಹದ ಉಷ್ಣತೆಯನ್ನು ದಾಖಲು ಮಾಡಬೇಕು. ದೇಹದ ಉಷ್ಣತೆ 101oಈಗಿಂತಲೂ ಕಡಿಮೆ ಆಗುವವರೆಗೆ ದೇಹವನ್ನು ತಂಪಾಗಿಸುವ ಯತ್ನವನ್ನು ಮುಂದುವರಿಸತಕ್ಕದ್ದು, ಐಸ್ ಬ್ಲಾಂಕೆಟ್ಗಳನ್ನು ಬಳಸಬಹುದಾಗಿದೆ.
- ವ್ಯಕ್ತಿಯ ನಾಡಿ ಬಡಿತ, ರಕ್ತದೊತ್ತಡ, ಮತ್ತು ಉಷ್ಣತೆಯನ್ನು ನಿರಂತರವಾಗಿ ದಾಖಲು ಮಾಡಿ ನಿಯಂತ್ರಣಕ್ಕೆ ಬರುವಲ್ಲಿವರೆಗೆ ಪ್ರಥಮ ಚಿಕಿತ್ಸೆ ಮುಂದುವರೆಸಿ.
ತಡೆಗಟ್ಟುವುದು ಹೇಗೆ? - ದೇಹದ ತಾಪಮಾನವನ್ನು ತಗ್ಗಿಸಲು ಬೇಸಿಗೆ ಸಮಯದಲ್ಲಿ ಕನಿಷ್ಟ 3ರಿಂದ 4ಲೀಟರ್ ನೀರು ಕುಡಿಯಬೇಕು.
- ಚರ್ಮ ಹೆಚ್ಚು ಬಿಸಿಯಾಗಿದ್ದರೆ ಒದ್ದೆ ಬಟ್ಟೆಯಿಂದ ಮೈಯನ್ನು ಚೆನ್ನಾಗಿ ಒರೆಸಬೇಕು ದೇಹವನ್ನು ತಂಪಾಗಿಸಬೇಕು.
- ಬೇಸಿಗೆ ಕಾಲದಲ್ಲಿ ಹೆಚ್ಚು ದಪ್ಪಗಿರುವ ಮತ್ತು ಬಿಗಿಯಾಗಿರುವ ಬಟ್ಟೆ ಧರಿಸಬಾರದು. ಜಾಸ್ತಿ ತೆಳುವಾದ ಹತ್ತಿ ಬಟ್ಟೆಯನ್ನು ಧರಿಸಿ ತಂಪುಗಾಳಿ ದೇಹಕ್ಕೆ ತಲುಪುವಂತೆ ಬಟ್ಟೆ ಧರಿಸಬೇಕು. ಗಾಢ ಬಣ್ಣದ ಮತ್ತು ಕಪ್ಪು ಬಟ್ಟೆಗಳನ್ನು ಬಳಸುವುದು ಸೂಕ್ತವಲ್ಲ, ಯಾಕೆಂದರೆ ಅವುಗಳು ಶಾಖವನ್ನು ಹೀರಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.
- ಆಲ್ಕೋಹಾಲ್ ಮತ್ತು ಕೆಫಿನ್ಯುಕ್ತ ಪಾನೀಯಗಳನ್ನು ಬೇಸಿಗೆಯಲ್ಲಿ ಬಳಸಲೇಬೇಡಿ. ನೈಸರ್ಗಿಕ ಪೇಯಗಳನ್ನು ಹೆಚ್ಚು ಬಳಸಿ. ದೇಹವನ್ನು ತಂಪಾಗಿರಿಸಬೇಕೆ0ದು ಅತಿಯಾದ ಐಸ್ಕ್ರೀಮ್ ತಿನ್ನುವುದು ಮತ್ತು ಹೆಚ್ಚು ಕೃತಕ ಸಕ್ಕರೆ ಹಾಕಿದ ಸಿದ್ಧ ಪಾನೀಯವನ್ನು ಸೇವಿಸುವುದು ಮೂರ್ಖತನ.
- ಬೇಸಿಗೆಯಲ್ಲಿ ಸಾಕಷ್ಟು ನೀರಿನಾಂಶ ಇರುವ ಆಹಾರವನ್ನು ಸೇವಿಸಬೇಕು ಗಂಜಿ, ಹಾಲು, ಎಳನೀರು, ಮಜ್ಜಿಗೆ ಇತ್ಯಾದಿ ಪೇಯಗಳಿಗೆ ಆಧ್ಯತೆ ನೀಡಿ.
- ಬಿಸಿಲ ಧಗೆ ಹೆಚ್ಚಾಗಿರುವ ಹೊರಗಿನ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು. ವಿಪರೀತ ಬಿಸಿಲು ಇರುವ ಸಮಯವಾದ ಬೆಳ್ಳಿಗ್ಗೆ 1೦ರಿಂದ ಸಂಜೆ 5ರವರೆಗೆ ಶ್ರಮದಾಯಕ ಕೆಲಸವನ್ನು ಬಿಸಿಲಿನಲ್ಲಿ ಮಾಡಬೇಡಿ.
ಕೊನೆಯ ಮಾತು:
ಹೀಟ್ ಸ್ಟ್ರೋಕ್ ಬಹಳ ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿ ಆಗಿರುತ್ತದೆ. ತೀವ್ರವಾದ ಉಷ್ಣತೆ ಮತ್ತು ಶಾಖಕ್ಕೆ ದೀರ್ಘಕಾಲ ದೇಹವನ್ನು ತೆರೆದುಕೊಳ್ಳುವುದರಿಂದ ಮತ್ತು ಅತೀ ಹೆಚ್ಚು ತಾಪಮಾನದಲ್ಲಿ ಕೆಲಸ ಮಾಡುವುದರಿಂದ ಹಾಗೂ ತೀರ್ವವಾದ ದೈಹಿಕ ಪರಿಶ್ರಮವುಳ್ಳ ದೈಹಿಕ ಚಟುವಟಿಕೆ ನಡೆಸುವುದರಿಂದ ಹೀಟ್ ಸ್ಟ್ರೋಕ್ ಉಂಟಾಗುತ್ತದೆ. ತಕ್ಷಣವೇ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡದಿದ್ದಲ್ಲಿ ಪ್ರಾಣಕ್ಕೆ ಕುತ್ತು ಬರಬಹುದು. ಸನ್ ಸ್ಟ್ರೋಕ್ ಕಾರಣದಿಂದ ಹಲವಾರು ರೀತಿಯ ದೈಹಿಕ ಸಮಸ್ಯೆಗಳು ಉದ್ಭವಿಸಿ ತೀರ್ವವಾದ ನಿರ್ಜಲೀಕರಣದಿಂದ “ಕೋಮಾ” ಉಂಟಾಗಿ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ಕಾರಣಗಳಿಂದ ಸಾಕಷ್ಟು ಮೂಂಜಾಗರೂಕತೆ ವಹಿಸಿ ‘ಸನ್ ಸ್ಟ್ರೋಕ್’ ಬರದಂತೆ ತಡೆಯುವುದರಲ್ಲಿ ಜಾಣತನ ಅಡಗಿದೆ.
ಡಾ|| ಮುರಳಿ ಮೋಹನ್ಚೂಂತಾರು
BDS,MDS,DNB,MBA,MOSRCR ED
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
9845135787
drmuraleemohan @gmail.com