
ಸುಬ್ರಹ್ಮಣ್ಯ ಜ10: “ಮಹಿಳೆಯರು ಇಂದು ವಿಶ್ವದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವರು. ಮನೆಯ ಅಡುಗೆ ಕೋಣೆಯಿಂದ ಹೊರಬಂದು ಸಮಾಜದ ಆಗುಹೋಗುಗಳನ್ನು ಮನಗಂಡು ತಮ್ಮಿಂದಾದಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಪರಿಸರ ರಕ್ಷಣೆಯನ್ನು ಮಾಡುವುದರೊಂದಿಗೆ ಪರಿಸರದಲ್ಲಿರುವ ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ,ಪೋಷಿಸಿ. ಮಹಿಳೆಯರಿಗಾಗಿ ಇರುವ ಇನ್ನರ್ ವೇಲ್ ಕ್ಲಬ್ ನಲ್ಲಿ ಕ್ರಿಯಾಶೀಲರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಅಶಕ್ತ ಜನರ ಬಾಳಿಗೆ ಬೆಳಕಾಗಿ” ಎಂದು ಇನ್ನರ್ವೀಲ್ ಜಿಲ್ಲೆ318 ರ ಜಿಲ್ಲಾ ಚೇರ್ಮೆನ್ ವೈಶಾಲಿ ಕುಡ್ವ ನುಡಿದರು.
ಅವರು ಶುಕ್ರವಾರ ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ಗೆ ಅಧಿಕೃತ ಭೇಟಿ ನೀಡಿದರು. ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರಾದ ಶ್ರುತಿ ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ನಾಯರ್ ಉಪಸಿತರಿದ್ದರು.
ಇದೇ ಸಂದರ್ಭದಲ್ಲಿ ಬಡ ಕುಟುಂಬಕ್ಕೆ ಬಾಲಕೃಷ್ಣ ಪೈ ದಂಪತಿಗಳು ಸಹಾಯಧನ ನೀಡಿದರು. ಜಿಲ್ಲಾಧ್ಯಕ್ಷರಾದ ವೈಶಾಲಿ ಕುಡ್ವ ಅವರು ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ಹೊರ ತಂದ ಬುಲೆಟ್ ಇನ್ ಬಿಡುಗಡೆ ಮಾಡಿದರು.
ಕ್ಲಬ್ ನ ಕಾರ್ಯದರ್ಶಿ ಚಂದ್ರ ಹೊನ್ನಪ್ಪ ವಾರ್ಷಿಕ ಕಾರ್ಯಕ್ರಮಗಳ ವರದಿ ವಾಚಿಸಿದರು. ಜಿಲ್ಲಾಧ್ಯಕ್ಷರಾದ ವೈಶಾಲಿ ಕುಡ್ವ ಹಾಗೂ ಸಮಾಜ ರತ್ನ ಪ್ರಶಸ್ತಿ ಪುರಸ್ಕೃತ ಚಂದ್ರ ಹೊನ್ನಪ್ಪ ಅವರುಗಳನ್ನು ಇನ್ನರ್ವೀಲ್ ವತಿಯಿಂದ ಗೌರವಿಸಲಾಯಿತು. ಸರೋಜಾ ಮೈಲಪ್ಪ ಹಾಗೂ ಸವಿತಾ ನವೀನ್ ಪ್ರಾರ್ಥನೆ ನೆರವೇರಿಸಿದರು. ಸಚಿತ ಗೋಪಾಲ್ ಜಿಲ್ಲಾಧ್ಯಕ್ಷರ ಪರಿಚಯಿಸಿದರು. ಭಾರತೀ ದಿನೇಶ್ ಸಂದೇಶ ವಾಚಿಸಿದರು. ಸೌಮ್ಯ ದಿನೇಶ ಧನ್ಯವಾದ ಸಮರ್ಪಿಸಿದರು. ವಿಮಲ ರಂಗಯ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಪೂರ್ವಾಧ್ಯಕ್ಷರುಗಳಾದ ವೇದ ಶಿವರಾಂ, ಶೋಭಾ ಗಿರಿಧರ್, ಲೀಲಾ ವಿಶ್ವನಾಥ್, ಜಾನಕಿ ವೆಂಕಟೇಶ್, ಸೌಮ್ಯ ಬಾಲಕೃಷ್ಣ ಪೈ, ಸದಸ್ಯರುಗಳಾದ ಶ್ರೀಜಾ ಚಂದ್ರಶೇಖರ್, ಅಕ್ಷತಾ ಕಲ್ಕುದಿ ಉಪಸ್ಥಿತರಿದ್ದರು.