Ad Widget

ಸುಬ್ರಹ್ಮಣ್ಯ : ಕುಕ್ಕೆ ದೇವಸ್ಥಾನದ ನಿವೃತ್ತ ಇಒ ಡಾ.ನಿಂಗಯ್ಯ ಅವರಿಗೆ ಎಸ್.ಎಸ್.ಪಿ.ಯು.‌ ಕಾಲೇಜಿನ ವತಿಯಿಂದ ಸನ್ಮಾನ

ಕರ್ತವ್ಯದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ ಅಧಿಕಾರಿಗಳೊಂದಿಗೆ ಸೇವೆ ನೆರವೇರಿಸಲು ದೊರಕಿರುವುದು ಭಾಗ್ಯ.ಇವರ ಸಲಹೆ ಮಾರ್ಗದರ್ಶನ ಆಡಳಿತ ವ್ಯವಸ್ಥೆಯಲ್ಲಿ ಉತ್ಕೃಷ್ಠವಾಗಿತ್ತು. ಶ್ರೀ ದೇವಳದ ಅವಳಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಸಾವಿರಾರು ಗ್ರಾಮೀಣ ಬಡ ವಿದ್ಯಾರ್ಥಿಗಳ ಅನುಕೂಲತೆಗಾಗಿ ಶುಲ್ಕ ಕಡಿತಗೊಳಿಸುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಪೂರಕವಾದ ಸಹಕಾರ ನೀಡಿದವರು.ಈ ಕಾರಣದಿಂದ ಶ್ರೀ ದೇವಳದ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ಕೇವಲ ಅರ್ಧದಷ್ಟು ಶುಲ್ಕ ಪಾವತಿಸಿ ಜ್ಞಾನಾರ್ಜನೆ ಮಾಡಲು ಕಳೆದ ವರ್ಷದಿಂದ ಮಕ್ಕಳಿಗೆ ಅವಕಾಶ ದೊರಕಿದೆ ಎಂದು ಎಸ್.ಎಸ್.ಪಿ.ಯು ಕಾಲೇಜಿನ ಪ್ರಾಚಾರ್ಯರ ಸೋಮಶೇಖರ ನಾಯಕ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ, ಕಾಲೇಜಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಶುಕ್ರವಾರ ನಿವೃತ್ತರಾದ ಡಾ.ನಿಂಗಯ್ಯ ಅವರಿಗೆ ಶ್ರೀ ದೇವಳದ ಎಸ್‌ಎಸ್‌ಪಿಯು ಕಾಲೇಜಿನ ವತಿಯಿಂದ ಶನಿವಾರ ನಡೆದ ಬೀಳ್ಕೊಡುಗೆ ಮತ್ತು ಗೌರವಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅಲ್ಲದೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಭವಿಷ್ಯಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡಿ ಅವರ ಭವಿಷ್ಯಕ್ಕೆ ದಾರಿದೀಪವಾದವರು ಎನ್ನುವುದು ಮುಖಸ್ತುತಿಯಲ್ಲ.ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಅನುಕೂಲತೆಯನ್ನು ಮಾಡಿಕೊಡುವ ಮೂಲಕ ಸಂಸ್ಥೆಯ ಪ್ರಗತಿಗೆ ಇವರ ಸಹಕಾರ ಸದಾ ಹಸಿರಾಗಿರುತ್ತದೆ ಎಂದರು.
ಭವಿಷ್ಯದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ:
ವಿದ್ಯೆ ಅನ್ನುವುದು ಬದುಕಿಗೆ ಅತ್ಯವಶ್ಯಕ.ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯಿಂದ ಬಂದಿರುತ್ತಾರೆ.ಅAತಹವರು ವಿದ್ಯೆಯಿಂದ ವಂಚಿತರಾಗಬಾರದು. ಎಂಬ ನಿಟ್ಟಿನಲ್ಲಿ ನಿಮ್ಮ ಪ್ರಾಚಾರ್ಯರಲ್ಲಿ ಚರ್ಚಿಸಿ ಸಹಕಾರ ನೀಡಿದ್ದೇನೆ.ಮುಂದೆ ಜ್ಞಾನ ಸಂಪಾದನೆ ಮಾಡಿ ಭವಿಷ್ಯದಲ್ಲಿ ಶ್ರೇಷ್ಠತೆ ಸಂಪಾದಿಸಬೇಕು.ಆಗ ನಮ್ಮ ಪ್ರಯತ್ನ ಸಾಫಲ್ಯವನ್ನು ಸಾಧಿಸುತ್ತದೆ.ಮುಂದೆ ಕೆಲವು ಬೋಧಕ ಬೋಧಕೇತರರ ಭವಿಷ್ಯ ರೂಪಣೆಯ ಹೊಣೆಯನ್ನು ಪ್ರಾಚಾರ್ಯರಿಗೆ ಒಪ್ಪಿಸಿ ತೆರಳುತ್ತಿದ್ದೇನೆ.ಸರ್ವರಿಗೂ ಒಳ್ಳೆಯದನ್ನು ಬಯಸುವ ಪ್ರಾಚಾರ್ಯರು ಈ ನಿಟ್ಟಿನಲ್ಲಿ ಸ್ವತಾಃ ಶ್ರಮಿಸುತ್ತಾರೆ ಎಂದು ಸನ್ಮಾನ ಸ್ವೀಕರಿಸಿದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು.

ಡಾ.ನಿಂಗಯ್ಯ ಅವರು ಸಭಾಂಗಣಕ್ಕೆ ಆಗಮಿಸುವ ಸಂದರ್ಭ ಕಾಲೇಜಿನ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ಎದ್ದು ನಿಂತು ಹೂಮಳೆಗೆರೆಯುವ ಮೂಲಕ ಕರತಾಡಣ ಮಾಡಿದರು. ತಮಗೆ ಮತ್ತು ಮುಂದೆ ಭವಿಷ್ಯದಲ್ಲಿ ವಿದ್ಯಾಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ನೀಡಿದ ಸಹಕಾರವನ್ನು ನೆನೆಯುತ್ತಾ ಅಧಿಕಾರಿಗಳಿಗೆ ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಿದರು.ವಿದ್ಯಾರ್ಥಿಗಳು ಎರೆದ ಪುಷ್ಪ ಮಳೆಯ ನಡುವೆ ಕೈ ಮುಗಿಯುತ್ತಾ ಡಾ.ನಿಂಗಯ್ಯ ಅವರು ವೇದಿಕೆಗೆ ಆಗಮಿಸಿದರು.ಬಳಿಕ ಪ್ರಾಚಾರ್ಯ ಸೋಮಶೇಖರ ನಾಯಕ್ ಡಾ.ನಿಂಗಯ್ಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.
ಡಾ.ನಿಂಗಯ್ಯ ಅವರ ಪತ್ನಿ ನಾಗರತ್ನ, ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ, ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಹಿರಿಯ ಉಪನ್ಯಾಸಕ ಎಂ.ಕೃಷ್ಣ ಭಟ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಹಿರಿಯ ಉಪನ್ಯಾಸಕರಾದ ಜಯಶ್ರೀ.ವಿ.ದಂಬೆಕೋಡಿ, ಗಿರೀಶ್,ಜಯಪ್ರಕಾಶ್.ಆರ್, ಉಪನ್ಯಾಸಕರಾದ ಮನೋಜ್ ಕುಮಾರ್ ಬಿ.ಎಸ್, ಜ್ಯೋತಿ.ಪಿ.ರೈ, ಯೋಗಣ್ಣ ಎಂ.ಎಸ್, ಸೌಮ್ಯಾ ದಿನೇಶ್, ಸುಧಾ, ಪೂರ್ಣಿಮಾ, ಸೌಮ್ಯಕೀರ್ತಿ ವೇದಿಕೆಯಲ್ಲಿದ್ದರು.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಶ್ರೀ ದೇವಳದ ನಂದೀಶ್ ಕಟ್ರಮನೆ, ಕಾಲೇಜಿನ ಸಿಬ್ಬಂದಿ ಮಹೇಶ್ ಕುಮಾರ್ ಕೆ.ಎಚ್ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಸವಿತಾ ಕೈಲಾಸ್, ಪ್ರವೀಣ್ ಎರ್ಮಾಯಿಲ್, ಶ್ರೀಧರ್ ಪುತ್ರನ್, ಜಯಪ್ರಕಾಶ್.ಆರ್ ಅನಿಸಿಕೆ ಮೂಲಕ ಶುಭ ಹಾರೈಸಿದರು.ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಸ್ವಾಗತಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಪುತ್ರನ್ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!