ಸುಬ್ರಹ್ಮಣ್ಯ : ರೈತರು ಹಾಗೂ ಕಾರ್ಮಿಕರ ಸಭೆ ; “ಇಚ್ಲಂಪಾಡಿ ಮರಳು ದಂಧೆ, ಕ್ರಮ ಕೈಗೊಳ್ಳದೇ ಇದ್ದಲ್ಲಿ ಜಿಲ್ಲಾಡಳಿತ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು” : ಕಿಶೋರ್ ಶಿರಾಡಿ

ಸುಬ್ರಹ್ಮಣ್ಯ ಜನವರಿ 1 : “ಕಡಬ ತಾಲೂಕಿನ ಇಚ್ಲಂಪಾಡಿ ನದಿ ಸಮೀಪ ಒಂದು ಕಡೆ ಮಾತ್ರ ಮರಳು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಅಲ್ಲಿ ಮರಳು ದಂದೆ ಅವ್ಯಾಹತವಾಗಿ ನಡೆಯುತ್ತಿದೆ. ಉಳಿದ ಕಡೆಗಳಲ್ಲಿ ಮರಳು ತೆಗೆಯಲು ಅವಕಾಶವಿದ್ದರೂ ಜಿಲ್ಲಾಡಳಿತ ಅನುಮತಿ ನೀಡದೆ ಗ್ರಾಮೀಣ ಭಾಗದ ಬಡವರು, ಆಶ್ರಯ ಯೋಜನೆಯಲ್ಲಿ ಮನೆ ಮಾಡುವವರು ಹಾಗೂ ಮಧ್ಯಮ ವರ್ಗದವರಿಗೆ ಇದು ಹೊಡೆತ ಬಿದ್ದಂತಾಗಿದೆ. ಆದ್ದರಿಂದ ಈ ಕೂಡಲೇ ಜಿಲ್ಲಾಡಳಿತ ಗ್ರಾಮೀಣ ಭಾಗದ ನದಿಗಳಲ್ಲಿ ಇರುವ ಮರಳು ತೆಗೆಯಲು ಅವಕಾಶ ನೀಡಬೇಕು ಹಾಗೂ ಇಚ್ಲಂಪಾಡಿ  ನದಿ ಭಾಗದ  ಉಳಿದ ಕಡೆಗಳಲ್ಲಿ ಕೂಡ ಮರಳು ತೆಗೆಯಲು ಅವಕಾಶ ನೀಡಬೇಕು ಇಲ್ಲದಿದ್ದಲ್ಲಿ ಜಿಲ್ಲಾಡಳಿತ ಕಚೇರಿ ಎದುರುಗಡೆ ಧರಣಿ  ಸತ್ಯಾಗ್ರಹ  ನಡೆಸಲಾಗುವುದು” ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಹೇಳಿದರು.
ಅವರು ಗುರುವಾರ ಸುಬ್ರಹ್ಮಣ್ಯದಲ್ಲಿ ಜರುಗಿದ ರೈತರು ಹಾಗೂ ಕಾರ್ಮಿಕರ ಸಭೆಯಲ್ಲಿ ಮಾತನಾಡುತ್ತಾ “ಈ ಹಿಂದೆ ಮೂರು ಯೂನಿಟ್ ಮರಳಿಗೆ ರೂ. 5,000 ಇದ್ದಿದ್ದು ಇದೀಗ ರೂ. 25,000ಗಳಿಗೆ ಏಕಾಏಕಿಯಾಗಿ  ಏರಿಸಲಾಗಿದೆ. ಇದರಿಂದಾಗಿ ಬಡವರ ಮನೆ ಕಟ್ಟುವ ಕನಸು ನನಸಾಗಿ ಉಳಿಯಲಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗೆಯೇ ಉನ್ನತ ಮಟ್ಟದ ಅಧಿಕಾರಿಗಳಿಗೆ ಜನಸಾಮಾನ್ಯರ ಸಮಸ್ಯೆ ಅರ್ಥವಾಗುವುದಿಲ್ಲವೇ” ಎಂದ ಅವರು “ನಾವು ಅಗ್ರಹಿಸುವುದೇನೆಂದರೆ ಪ್ರತಿ ಗ್ರಾಮ ಪಂಚಾಯತ್ ನ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅವಕಾಶ ನೀಡಬೇಕು ಹಾಗೂ ಮರಳು ತೆಗೆಯುವ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಯಪ್ರಕಾಶ್ ಕೂಜುಗೋಡು, ಅಶೋಕ್ ಕುಮಾರ್ ಮೂಲೆಮಜಲು ಹಾಗೂ ಅಚ್ಯುತ ಗೌಡ ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading