ಐವರ್ನಾಡು ಗ್ರಾಮದ ಪಾಲೇಪ್ಪಾಡಿ ಮೀರಾ ಬಾಲಕೃಷ್ಣ ಅವರನ್ನು ದಿನಾಂಕ 02/03/2008 ರಂದು ಬೆಳಗ್ಗಿನ ಜಾವಾ ಯಾರೋ ಅಪರಚಿತರು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಮೀರಾ ಬಾಲಕೃಷ್ಣ ರವರ ಕೈ ಕಾಲುಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿ ಮನೆಯಲ್ಲಿದ್ದ ಹಣ ವಡವೆ ದೋಚಲು ಪ್ರಯತ್ನಿಸಿದ್ದರು.ಆ ಸಮಯದಲ್ಲಿ ಮನೆ ಕೆಲಸದಾಕೆ ವಿಮಲ ಎಂಬುವರು ಮನೆಯ ಒಳಗಡೆ ಪ್ರವೇಶಿಸಿರುವುದನ್ನು ನೋಡಿದ್ದು, ಆಕೆಯ ಮೇಲೆ ಕೂಡಾ ಹಲ್ಲೆಯನ್ನು ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳು ವಿಮಲ ರವರಿಗೆ ಹಲ್ಲೆ ಮಾಡಿದ್ದ ಕಾರಣ ಅವರಿಗೂ ಕೂಡಾ ಪ್ರಜ್ಞೆ ಕಳೆದುಕೊಂಡಿದ್ದರು. ವಿಷಯ ತಿಳಿದು ಸೇರಿದ ಜನರು ವಿಮಲರವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆ ಪ್ರಕಾರ ವಿಮಲರವರು ಫಿರ್ಯಾದಿ ಯನ್ನು ನೀಡಿದ್ದು ಪ್ರಕರಣವನ್ನು ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಆ ಬಳಿಕ ಪ್ರಕರಣದಲ್ಲಿ ತನಿಖೆಯ ಪ್ರಗತಿ ಕಾಣದೆ ಇದ್ದುದರಿಂದ ಪ್ರಕರಣವನ್ನು ಸಿ.ಐ.ಡಿ ಕಛೇರಿಯ ಅಂದಿನ ಡಿ. ಎಸ್. ಪಿ ಆದ ಏನ್. ಎಂ. ರಾಮಲಿಂಗಪ್ಪ ಇವರ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರ ಆದೇಶಿಸಿತ್ತು. ಅವರ ತನಿಖೆ ಅದಾರದ ಮೇರೆಗೆ ಒಟ್ಟು 6 ಆರೋಪಿಗಳ ಹೆಸರನ್ನು ಹೆಸರಿಸಿ ಅವರ ಪೈಕಿ ಐದು ಆರೋಪಿಗಳನ್ನು ಪ್ರಕರಣ ನಡೆದ ಸುಮಾರು 4 ವರ್ಷ ಬಳಿಕ ಪತ್ತೆ ಮಾಡಿ ಅವರನ್ನು ದಸ್ತಗಿರಿ ಮಾಡಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 120 ಬಿ , 448,396 ಮತ್ತು 397 ಐ.ಪಿ.ಸಿ ಯಂತೆ ದೋಷರೋಪಣ ಪಟ್ಟಿಯನ್ನು ಮಾನ್ಯ ಜಿಲ್ಲಾ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಸಿ.ಐ.ಡಿ ಪೊಲೀಸರಿಂದ ದಾಖಲಿಸಲಾಗಿತ್ತು.
ಈ ಪ್ರಕರಣ ದಲ್ಲಿ ಸುಮಾರು 50 ಸಾಕ್ಷಿಗಳನ್ನು ಹೆಸರಿಸಿ ಅವುಗಳ ಪೈಕಿ 30 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಮಾನ್ಯ ದ.ಕ ಜಿಲ್ಲಾ ಮಂಗಳೂರಿನ ಐದನೇ ಹೆಚ್ಚುವರಿ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶೆಯಾದ ಶ್ರೀಮತಿ ಸರಿತಾ ಡಿ. ರವರು ಅಭಿಯೋಜನೆಯು ಮಾಡಲಾದ ಆರೋಪವನ್ನು ಸಾಬೀತುಪಡಿಸುವಲ್ಲಿ ಅಭಿಯೋಜನೆಯು ವಿಫಲಗೊಂಡಿದೆ ಎಂಬ ಕಾರಣವನ್ನು ನೀಡಿ ದಿನಾಂಕ 25/02/2025 ರಂದು ಆರೋಪಿಗಳನ್ನು ದೋಷಮುಕ್ತ ಗೊಳಿಸಿ ತಿರ್ಪು ನೀಡಿದೆ. ಆರೋಪಿಗಳ ಪೈಕಿ 1 ನೇ ಆರೋಪಿ ರೋಷನ್ ತಲೆ ಮರೆಸಿಕೊಂಡಿದ್ದು ಆರೋಪಿ 3. ಶಿವರಾಜ್ 4. ದೇವಿಪ್ರಸಾದ್ 5.ಮಹವಿರ ಇವರ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ ,ಶ್ಯಾಮ್ ಪ್ರಸಾದ್ ಎನ್.ಕೆ. ವಾದಿಸಿದ್ದರು. ಆರೋಪಿ 2.ಸಚಿನ್ ಹಾಗೂ 6.ರವಿಕಿರಣ್ ಪರವಾಗಿ ಪುತ್ತೂರಿನ ವಕೀಲರಾದ ಮಹೇಶ್ ಕಜೆ ಹಾಗೂ ಕುಮಾರಿ ಸೌಮ್ಯ ರವರು ವಾದಿಸಿದ್ದರು.